ಮುಂಬಯಿ, ಆ.06: ಒಳ್ಳೆಯ ಯೋಚನೆಗಳು ಯಾವಾಗಲೂ ಒಳ್ಳೆಯ ಫಲಿತಾಂಶಗಳನ್ನೇ ಕೊಡುತ್ತವೆ. ಅದಕ್ಕಾಗಿ ಕೆಟ್ಟ ಸ್ಥಿತಿಯಲ್ಲಿದ್ದರೂ ಒಳ್ಳೆಯದನ್ನೇ ಯೋಚಿಸಿ ಬಾಳುವಲ್ಲಿ ಪತ್ರಕರ್ತರು ಮತ್ತೊಬ್ಬರಿಗೆ ಮಾದರಿ ಆಗಬೇಕು. ನಮ್ಮ ಜೀವನದಲ್ಲಿ ಈ ಸದ್ಗುಣಗಳಿಂದ ಪವಾಡವೇ ನಡೆಯಲೂ ಬಹುದು. ಆದ್ದರಿಂದ ಸುದ್ದಿಗಾರರಾದ ನಾವು ಪರರಿಗಾಗಿ ಬದುಕು ತೋರಿಸುವ ಪತ್ರಕರ್ತರಾಗುವ ಅವಶ್ಯಕತೆವಿದೆ. ಎಲ್ಲವನ್ನೂ ಸಹಿಸಿಕೊಳ್ಳುವ ಮನಸ್ಥಿತಿವುಳ್ಳವರಿಂದ ಮಾತ್ರ ಸಾಮಾಜಿಕ ಕಳಕಳಿ ಸಾಧ್ಯವಾಗುತ್ತಿದೆ. ಇವರಿಂದ ಮಾತ್ರ ಸಂಘ-ಸಂಸ್ಥೆಗಳ ಸಾರಥ್ಯವನ್ನೀಡಲು ಸಾಧ್ಯವಾಗುವುದು. ಆದುದರಿಂದ ಪತ್ರಕರ್ತರು ಪ್ರಾಮಾಣಿಕರಾಗಿ ಬಾಳಿ ಪರರಿಗಾಗಿ ಬದುಕು ತೋರಿಸುವ ಸಜ್ಜನರಾಗಬೇಕು ಎಂದು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಅಧ್ಯಕ್ಷ ರೋನ್ಸ್ ಬಂಟ್ವಾಳ್ ತಿಳಿಸಿದರು.
ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಅಂಧೇರಿ ಪೂರ್ವದ ಸಾಲೀಟರಿ ಕಾರ್ಪೊರೇಟ್ ಪಾರ್ಕ್ನ ಕ್ಲಬ್ ಹೌಸ್ ಸಭಾಗೃಹದಲ್ಲಿ ಕನ್ನಡಿಗ ಪತ್ರಕರ್ತರ ಸಂಘದ ಹದಿನೈದನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಬಂಟ್ವಾಳ್ ಮಾತನಾಡಿದರು.
ಕಪಸಮ ಉಪಾಧ್ಯಕ್ಷ ಡಾ| ಶಿವ ಮೂಡಿಗೆರೆ, ಗೌರವ ಪ್ರಧಾನ ಕಾರ್ಯದರ್ಶಿ ಸಾ.ದಯಾ (ದಯಾನಂದ್), ಗೌರವ ಕೋಶಾಧಿಕಾರಿ ವಿಶ್ವನಾಥ್ ಪೂಜಾರಿ ನಿಡ್ಡೋಡಿ, ಜೊತೆ ಕಾರ್ಯದರ್ಶಿ ಸವಿತಾ ಎಸ್.ಶೆಟ್ಟಿ, ಜೊತೆ ಕೋಶಾಧಿಕಾರಿ ಡಾ| ದುರ್ಗಪ್ಪ ವೈ.ಕೋಟಿಯವರ್ ವೇದಿಕೆಯಲ್ಲಿ ಆಸೀನರಾಗಿದ್ದರು.
ಸಾ.ದಯಾ (ದಯಾನಂದ್) ಗತ ವಾರ್ಷಿಕ ಮಹಾಸಭೆಗೆ ತಿಳಿಸಿದರು. ಸವಿತಾ ಎಸ್.ಶೆಟ್ಟಿ ಗತ ವಾರ್ಷಿಕ ವಾರ್ಷಿಕ ಚಟುವಟಿಕೆಗಳ ಮಾಹಿತಿಯನ್ನಿತ್ತರು. ವಿಶ್ವನಾಥ್ ಪೂಜಾರಿ ನಿಡ್ಡೋಡಿ ಗತ ವಾರ್ಷಿಕ ಲೆಕ್ಕಪತ್ರಗಳ ಮಾಹಿತಿ ನೀಡಿದರು. ನಂತರ ಸಂಘದ 2023-2024ನೇ ಸಾಲಿನ ಲೆಕ್ಕಪರಿಶೋಧಕರನ್ನಾಗಿ ಪ್ರತಿಷ್ಠಿತ ಚಾರ್ಟರ್ಡ್ ಎಕೌಂಟೆಂಟ್ ಸಿಎ| ಐ.ಆರ್ ಶೆಟ್ಟಿ ಎಂಡ್ ಕಂಪೆನಿ ಸಂಸ್ಥೆಯನ್ನೇ ಪುನಃರ್ ನೇಮಕ ಗೊಳಿಸಲಾಯಿತು.
ಸಭೆಯಲ್ಲಿ ಕಪಸಮ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ರಂಗ ಎಸ್.ಪೂಜಾರಿ, ನಾಗೇಶ್ ಪೂಜಾರಿ ಏಳಿಂಜೆ, ಅನಿತಾ ಪಿ.ಪೂಜಾರಿ ತಾಕೋಡೆ, ನಾಗರಾಜ್ ಕೆ.ದೇವಾಡಿಗ, ಗೋಪಾಲ್ ತ್ರಾಸಿ, ಸದರಾಮ ಎನ್.ಶೆಟ್ಟಿ ಸಂಪದಮನೆ, ಶ್ಯಾಮ್ ಎಂ.ಹಂಧೆ, ಸಲಹಾ ಸಮಿತಿ ಸದಸ್ಯರಾದ ಡಾ| ಸುನೀತಾ ಎಂ.ಶೆಟ್ಟಿ, ನ್ಯಾ| ಕೆ.ಪಿ ಪ್ರಕಾಶ್ ಎಲ್.ಶೆಟ್ಟಿ, ನ್ಯಾ| ಬಿ.ಮೋಹಿದ್ಧೀನ್ ಮುಂಡ್ಕೂರು, ಡಾ| ಸುರೇಶ್ ಎಸ್.ರಾವ್, ಸುರೇಂದ್ರ ಎ.ಪೂಜಾರಿ, ಗ್ರೇಗೋರಿ ಡಿ’ಅಲ್ಮೇಡಾ, ವಿಶೇಷ ಆಮಂತ್ರಿತ ಸದಸ್ಯರಾದ ಡಾ| ಶಿವರಾಮ ಕೆ.ಭಂಡಾರಿ, ಹರೀಶ್ ಪೂಜಾರಿ ಕೊಕ್ಕರ್ಣೆ, ಚಂದ್ರಶೇಖರ ಆರ್.ಬೆಳ್ಚಡ ಸೇರಿದಂತೆ ಸಂಘದ ಸದಸ್ಯರನೇಕರು ಹಾಜರಿದ್ದರು.
ಮೋಹಿದ್ಧೀನ್ ಮುಂಡ್ಕೂರು ಮಾತನಾಡಿ ಬಹಳ ಕಷ್ಟಪಟ್ಟು ಕಟ್ಟಿದ ಸಂಸ್ಥೆ ಇದಾಗಿದ್ದು ಸಂಸ್ಥೆಯ ಎಲ್ಲ ಸದಸ್ಯರು ಸಂಸ್ಥೆಯ ಪಾಲುದಾರರು ಆಗಿದ್ದಾರೆ. ಸದಸ್ಯರ ಆರೋಗ್ಯ ವಿಷಯದ ನಿಮ್ಮ ಕಾರ್ಯ ಶ್ಲಾಘನೀಯ. ಪತ್ರಕರ್ತರ ಆರೋಗ್ಯ ತುಂಬಾ ಮುಖ್ಯ. ಪತ್ರಕರ್ತರ ಜೀವನ ರಕ್ಷಣೆವಾದರೆ ನಮ್ಮ ಸಮಾಜ, ದೇಶದ ರಕ್ಷಣೆ ಸುಲಭವಾಗುವುದು ಎಂದರು.
ಪತ್ರಕರ್ತರ ಸಂಘದ ಮುಂದಿನ ವರ್ಷದ ಚಟುವಟಿಕೆಗಳ ಆಯ-ವ್ಯಯ ಕುರಿತು ಮಹಾಸಭೆಯ ಮುಂದೆ ಪ್ರಸ್ತಾಪಿಸಿದರೆ ಒಳಿತು ಎಂದು ಚಂದ್ರಶೇಖರ ಬೆಳ್ಚಡ ತಿಳಿಸಿದರು.
ಡಾ| ಶಿವ ಮೂಡಿಗೆರೆ ಸ್ವಾಗತಿಸಿದರು. ಸದಸ್ಯರ ಪರವಾಗಿ ಪ್ರೇಮಾನಂದ ಆರ್.ಕುಕ್ಯಾನ್, ಡಾ| ಸತೀಶ್ ಎನ್.ಬಂಗೇರ, ಡಾ| ದಿನೇಶ್ ಶೆಟ್ಟಿ ರೆಂಜಳ, ನಾಗೇಶ್ ಪೂಜಾರಿ ಏಳಿಂಜೆ ಮಾತನಾಡಿ ಸಂಘದ ಶ್ರೇಯಸ್ಸಿಗಾಗಿ ಸಲಹಿ ಶುಭಕೋರಿದರು. ಸವಿತಾ ಎಸ್.ಶೆಟ್ಟಿ ಕೃತಜ್ಞತೆ ಸಲ್ಲಿಸಿದರು.