Kannadiga Patrakartara Sangha Mumbai

ಸಾಹಿತಿಗಳು ಎಂದೆಂದಿಗೂ ಅಜರಾಮರರು : ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ

ಮುಂಬಯಿ, ಅ.29: ತೊಂಬತ್ತು ವರ್ಷಕ್ಕಿಂತಲೂ ಹೆಚ್ಚು ವಯಸ್ಸಿನ ಹಿರಿಜೀವ, ಡಾಕ್ಟರ್ ಸುನೀತಾ ಶೆಟ್ಟಿ ಅವರನ್ನು ಗೌರವಿಸುವುದು ನನಗೆ ಅಭಿಮಾನವೆನಿಸುತ್ತಿದೆ. ವ್ಯಕ್ತಿ ಇಂದು ಇದ್ದು ನಾಳೆ ಇಲ್ಲವಾಗಬಹುದು ಆದರೆ ಸಾಹಿತಿಯಾದವನು ತನ್ನ ಕೃತಿಗಳ ಮೂಲಕ ಎಂದೆಂದೂ ಅಮರನಾಗಿರುತ್ತಾನೆ. ಸಾಹಿತಿಗಳೆಂದರೆ ನನಗೆ ಗೌರವ, ಪ್ರೀತಿಪಾತ್ರರು. ಲೇಖಕರು, ಸಾಹಿತಿಗಳು ಇವರೆಲ್ಲರೂ ಸ್ವಲ್ಪವೇ ದಿನದವರಲ್ಲ. ರಾಜ್ಯಪಾಲರು ಸೀಮಿತ ಅವಧಿಗೆ ಮೀಸಲಾಗಿರುವವರು. ಆದರೆ ಸಾಹಿತಿಗಳು ಅಸ್ತಂತಗತರಾದರೂ ಅಜರಾಮರರಾಗಿರುತ್ತಾರೆ.
ಎಂದು ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ನುಡಿದರು.

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಸಂಸ್ಥೆಯು ಇಂದಿಲ್ಲಿ ಶುಕ್ರವಾರ ಮಧ್ಯಾಹ್ನ ಕಪಸಮ ಅಧ್ಯಕ್ಷ ರೋನ್ಸ್ ಬಂಟ್ವಾಳ್ ನೇತೃತ್ವದಲ್ಲಿ ಮುಂಬಯಿ ಅಲ್ಲಿನ ರಾಜಭವನದಲ್ಲಿ ಆಯೋಜಿಸಿದ್ದ `ಪುರಸ್ಕಾರ ಪ್ರದಾನ’ ಕಾರ್ಯಕ್ರಮ ಉದ್ದೇಶಿಸಿ ರಾಜ್ಯಪಾಲ ಕೊಶ್ಯಾರಿ ಮಾತನಾಡಿದರು.

ಮುಂಬಯಿಗೆ ಬರುವ ಮೊದಲು ಬಂಗಾಲಿ ಒಂದೇ ಒಳ್ಳೆಯ ಸಾಹಿತ್ಯ ಹೊಂದಿರುವ ಭಾಷೆ ಅಂದುಕೊಂಡಿದ್ದೆ. ಇಲ್ಲಿಗೆ ಬಂದ ನಂತರ ಇತರ ಭಾಷೆಗಳಲ್ಲೂ ಶ್ರೇಷ್ಠ ಸಾಹಿತ್ಯ ರಚನೆ ಗೊಂಡಿರುವುದನ್ನು ನಾನು ಗಮನಿಸಿದ್ದೇನೆ. ನಮ್ಮ ಭಾಷೆ, ಪ್ರದೇಶ, ನಮ್ಮ ಸಮುದಾಯ, ಸಾಹಿತ್ಯಗಳನ್ನು ಪ್ರೀತಿಸುವಂತೆ, ಗೌರವಿಸುವಂತೆ ನಮ್ಮ ಭಾರತವನ್ನೂ ನಾವು ಪ್ರೀತಿಸಬೇಕು ಮತ್ತು ಗೌರವಿಸಬೇಕು. ವಯಸ್ಸಿನಲ್ಲಿ ವಯೋವೃದ್ಧೆಯಾದರೂ ಆತ್ಮವಿಶ್ವಾಸದಲ್ಲಿ ಯೌವನದ ತುಂಬಿದ ತೊಂಬತ್ತರ ಅಕ್ಕನನ್ನು ಅಕ್ಕರೆಯಿಂದ ಸನ್ಮಾನಿಸುವುದು ನನ್ನ ಭಾಗ್ಯವೇ ಸರಿ.

ಇಂದು ನನಗೆ ಇಷ್ಟೊಂದು ಬಹುಮುಖಿ ಪ್ರತಿಭೆಯ ಸಾಹಿತಿಯ ಪಕ್ಕದಲ್ಲಿ ಆಸೀನರಾಗಿಸಿ ನನ್ನಿಂದ ಗೌರವಿಸಿಕೊಳ್ಳುವುದು ನನ್ನ ಸೌಭಾಗ್ಯವಂತೆನಿಸಿದ್ದೇನೆ. ಕನ್ನಡಿಗರು ಮುಂಬಯಿಯಲ್ಲಿದ್ದು ಕನ್ನಡದ ಮೂಲಕ ತಮ್ಮ ಅಸ್ಮಿತೆಯನ್ನು ಮಾಡಿರುವುದು ಪ್ರಶಂಸನೀಯ. ಕರ್ನಾಟಕದ ಕನ್ನಡತಿಯಾಗಿದ್ದು ಸಾಹಿತ್ಯದ ಕೃಷಿಮಾಡಿದ ಸುನೀತಾ ಅವರ ಸೇವೆ ಸತ್ವಯುತವಾಗಿದೆ. ಲೇಖನಿಯ ತಾಕತ್ತಿಗೆ ಸಂದ ಗೌರವ ಇದಾಗಿದೆ. ಇಂತಹ ನಮ್ಮ ದೀದಿ (ಅಕ್ಕ) ಶತಾಯುಷಿಯಾಗಿ ಬಾಳಲಿ. ನಾವು ಬಹುಭಾಷಿಗರಾಗಿದ್ದರೂ ಮೊದಲಾಗಿ ಭಾರತೀಯರಾಗಿರಬೇಕು ಎಂದು ಸಲಹಿದರು.

ರಾಜ್ಯಪಾಲರ ಅಧಿಕೃತ ಕಾರ್ಯಾಲಯದ ಜಲ್ ವಿಹಾರ್ ಸಮಲೋಚನಾ ಸಭಾಗೃಹದಲ್ಲಿ ನಡೆಸಲ್ಪಟ್ಟ ಸರಳ ಕಾರ್ಯಕ್ರಮದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಅವರು ಕಪಸಮ ಸಲಹಾ ಸಮಿತಿ ಸದಸ್ಯೆ, ಹಿರಿಯ ಸಾಹಿತಿ, ಕವಯತ್ರಿ, ಪ್ರಾಧ್ಯಾಪಕಿ ಡಾ| ಸುನೀತಾ ಎಂ.ಶೆಟ್ಟಿ ಇವರಿಗೆ `ಚೆನ್ನಭೈರದೇವಿ’ ಬಿರುದುನೊಂದಿಗೆ ಪುರಸ್ಕಾರ ಫಲಕ ಪ್ರದಾನಿಸಿ ಗೌರವಿಸಿ ಅಭಿನಂದಿಸಿದರು.

ನಾನು ಕರ್ನಾಟಕದಿಂದ ಮುಂಬಯಿಗೆ ಬಂದು 65 ವರ್ಷಗಳು ಸಂದು ಹೋದವು. ಈ ಆವಧಿಯಲ್ಲಿ ಅನೇಕ ಭಾಷಿಕರ ಸಂಪರ್ಕ ನನಗೆ ಬಂದ ಕಾರಣ, ನನ್ನ ಬರವಣಿಗೆಯಲ್ಲೂ ಏನಾದರೂ ಸಾಧನೆ ಮಾಡುವುದು ನನ್ನಿಂದ ಸಾಧ್ಯವಾಯಿತು. ಅದ್ದರಿಂದ ಈ ಮಹಾನಗರಕ್ಕೆ ಇಲ್ಲಿಯ ಎಲ್ಲ ಬಂಧುಗಳಿಗೆ ನಾನು ಕೃತಜ್ಞಳಾಗಿದ್ದೇನೆ. ಮುಂಬಯಿಯ ಹಾಗೂ ಒಳನಾಡಿನ ಪತ್ರಿಕಾ ಮಾಧ್ಯಮಗಳು ನನ್ನ ಬರವಣಿಗೆಗೆ ಪ್ರೋತ್ಸಹ ಕೊಟ್ಟಿದ್ದು ಎಲ್ಲರಿಗೂ ನಾನು ಋಣಿ ಆಗಿರುವೆ. ಮಹಾರಾಷ್ಟ್ರ ಮತ್ತು ಕರ್ನಾಟಕ ಮಧುರ ಸಂಬಂಧಕ್ಕೆ ಪ್ರಾಚೀನ ಇತಿಹಾಸವಿದೆ.

ಇಲ್ಲಿ ಆಳಿದ ಶಿಲಾಹಾರ ರಾಜವಂಶದ ಭಾಷೆ ಕನ್ನಡವೇ ಆಗಿತ್ತು. ಅವರ ವಂಶಜರು ಈಗ ಶೇಲಾರ ಹೆಸರಿನಿಂದ ಪ್ರಖ್ಯಾತರಾಗಿದ್ದಾರೆ. ಆದ್ದರಿಂದ ಕನ್ನಡಿಗಳಾದ ನಾನು ಇಂದು ಮಹಾರಾಷ್ಟ್ರದ ರಾಜಭವನದಲ್ಲಿ ಕನ್ನಡದಲ್ಲಿ ಮಾತಾಡುವುದು ಅಂದರೆ ತುಂಬ ಸಂತೋಷವೆನಿಸುತ್ತದೆ. ಇಲ್ಲಿಯ ರಾಜ್ಯಪಾಲರ ಕೈಯಿಂದ ನಾನು ಗೌರವ ಸ್ವೀಕಾರ ಮಾಡುವುದು ನನ್ನ ಬದುಕಿನಲ್ಲೇ ಮರೆಯಲಾಗದ ಭಾಗ್ಯದ ಕ್ಷಣ. ಬಹುಭಾಷಿಗರಿರುವ ಮಹಾರಾಷ್ಟ್ರದಲ್ಲಿ ಭಾಷಾ ಬಾಂಧವ್ಯ ಇದೆ. ಇದಕ್ಕಾಗಿ ನಾನು ಮಹಾರಾಷ್ಟ್ರ ಸರಕಾರವನ್ನೂ ಅಭಿನಂದಿಸುತ್ತೇನೆ ಎಂದು ಪುರಸ್ಕಾರಕ್ಕೆ ಉತ್ತರಿಸಿ ಡಾ| ಸುನೀತಾ ಶೆಟ್ಟಿ ತಿಳಿಸಿದರು.

ಈ ಸಂದರ್ಭದಲ್ಲಿ ಸುನೀತಾ ಶೆಟ್ಟಿ ಪರಿವಾರದ ಭರತ್ ಎಂ.ಶೆಟ್ಟಿ (ಸುಪುತ್ರ), ಭೂಮಿಕಾ ಎಂ.ಶೆಟ್ಟಿ ಮತ್ತು ಸತ್ಯ ಪ್ರದೀಪ್ ಶೆಟ್ಟಿ (ಸುಪುತ್ರಿಯರು), ಮಹಾಬಲ್ ಬಿ.ಶೆಟ್ಟಿ (ಅಳಿಯ), ಕಪಸಮ ಉಪಾಧ್ಯಕ್ಷ ರಂಗ ಎಸ್.ಪೂಜಾರಿ, ಗೌರವ ಕಾರ್ಯದರ್ಶಿ ರವೀಂದ್ರ ಆರ್.ಶೆಟ್ಟಿ ತಾಳಿಪಾಡಿ, ಗೌರವ ಕೋಶಾಧಿಕಾರಿ ನಾಗೇಶ್ ಪೂಜಾರಿ ಏಳಿಂಜೆ, ಪತ್ರಕರ್ತರ ಭವನ ಸಮಿತಿ ಕಾರ್ಯಾಧ್ಯಕ್ಷ ಡಾ| ಶಿವ ಮೂಡಿಗೆರೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ| ದಿನೇಶ್ ಶೆಟ್ಟಿ ರೆಂಜಾಳ, ವಿಶ್ವನಾಥ್ ಪೂಜಾರಿ ನಿಡ್ಡೋಡಿ, ನಾಗರಾಜ್ ಕೆ.ದೇವಾಡಿಗ, ಅನಿತಾ ಪಿ.ಪೂಜಾರಿ ತಾಕೋಡೆ, ಜಯಂತ್ ಕೆ.ಸುವರ್ಣ, ಸಲಹಾ ಸಮಿತಿ ಸದಸ್ಯರಾದ ಸಿಎ| ಐ.ಆರ್ ಶೆಟ್ಟಿ, ನ್ಯಾ| ರೋಹಿಣಿ ಜೆ. ಸಾಲ್ಯಾನ್, ನ್ಯಾ| ಕೆ.ಪಿ ಪ್ರಕಾಶ್ ಎಲ್.ಶೆಟ್ಟಿ, ಗ್ರೆಗೋರಿ ಡಿಅಲ್ಮೇಡಾ, ಸುರೇಂದ್ರ ಎ.ಪೂಜಾರಿ, ಕಡಂದಲೆ ಸುರೇಶ್ ಎಸ್.ಭಂಡಾರಿ, ಪಂ| ನವೀನ್‍ಚಂದ್ರ ಆರ್.ಸನೀಲ್, ಸುಧಾಕರ್ ಉಚ್ಚಿಲ್, ವಿಶೇಷ ಆಮಂತ್ರಿತ ಸದಸ್ಯರಾದ ಗೋಪಾಲ್ ತ್ರಾಸಿ, ಸವಿತಾ ಎಸ್.ಶೆಟ್ಟಿ, ಕರುಣಾಕರ್ ವಿ.ಶೆಟ್ಟಿ, ಸದಾನಂದ ಕೆ.ಸಫಲಿಗ, ಸಿಎ| ಜಗದೀಶ್ ಬಿ.ಶೆಟ್ಟಿ, ಪೋಷಕ ಸದಸ್ಯ ಡಾ| ಶಿವರಾಮ ಕೆ.ಭಂಡಾರಿ, ಸದಸ್ಯರಾದ ತಾರಾ ಆರ್.ಬಂಟ್ವಾಳ್, ಆರೀಫ್ ಕಲಕಟ್ಟಾ, ಚಂದ್ರಶೇಖರ್ ಆರ್.ಬೆಳ್ಚಡ, ಸತೀಶ್ ಎಸ್.ಸಾಲಿಯನ್, ಸಂಪದಮನೆ ಸದರಾಮ ಎನ್.ಶೆಟ್ಟಿ ಉಪಸ್ಥಿತರಿದ್ದರು.

ವಾಣಿಜ್ಯ ರಾಜಧಾನಿ ಮುಂಬಯಿಯ ರಾಜಭವನದಲ್ಲಿ ಮೊಳಗಿದ ಕನ್ನಡ ಡಿಂಡಿಮ:

ಮುಂಬಯಿ ರಾಜಭವನದಲ್ಲಿ ಇಂಗ್ಲೀಷ್, ಹಿಂದಿ, ಮರಾಠಿ ಜೊತೆಜೊತೆಗೆ ಕನ್ನಡನಾಡಿನ ಕನ್ನಡ, ತುಳು, ಕೊಂಕಣಿ, ಬ್ಯಾರಿ ಭಾಷೆಗಳಲ್ಲಿ ಸ್ವಾಗತಗೈದ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ರೋನ್ಸ್ ಬಂಟ್ವಾಳ್ ರಾಜ್ಯಪಾಲರ ಮೆಚ್ಚುಗೆಯ ನುಡಿಗಳಿಗೆ ಪಾತ್ರರಾದರು. ಒಟ್ಟು ಶಿಸ್ತುಬದ್ಧವಾಗಿ ಕಾರ್ಯಕ್ರಮ ಸಂಯೋಜಿಸಿ ಎಲ್ಲರ ಅಭಿನಂದನೆಗೆ, ಅಭಿವಂದನೆಗೆ ಪಾತ್ರರಾದರು.

ರೋನ್ಸ್ ಬಂಟ್ವಾಳ್ ಸ್ವಾಗತಿಸಿ ಅಕ್ಷತೆ, ಮಂಗಳೂರು ಮಲ್ಲಿಗೆ, ಹಿಂಗಾರ, ವೀಳ್ಯೆದೆಲೆ, ಅಡಿಕೆ, ಬೆಲ್ಲ, ಜಲ ಗಡಿಕೆವುಳ್ಳ ಹರಿವಾಣ ನೀಡಿ ಶಾಲು ಹೊದೆಸಿ ಸ್ಮರಣಿಕೆಯನ್ನಿತ್ತು ರಾಜ್ಯಪಾಲರಿಗೆ ತುಳುನಾಡ ಸಂಪ್ರದಾಯದಂತೆ ವಿಶೇಷವಾಗಿ ಗೌರವಿಸಿದರು. ಗೌ| ಪ್ರ| ಕಾರ್ಯದರ್ಶಿ ಅಶೋಕ ಎಸ್.ಸುವರ್ಣ ಪ್ರಸ್ತಾವನೆಗೈದರು. ಜೊತೆ ಕೋಶಾಧಿಕಾರಿ ಡಾ| ಜಿ.ಪಿ ಕುಸುಮಾ ಅವರು ಸುನೀತಾ ಶೆಟ್ಟಿ ಬಗ್ಗೆ ಸ್ಥೂಲವಾದ ಮಾಹಿತಿಯನ್ನಿತ್ತರು. ವಿಶೇಷ ಆಮಂತ್ರಿತ ಸದಸ್ಯ ಸಾ.ದಯಾ ಗೌರವಿಸಲ್ಪಟ್ಟವರ ಯಾದಿ ವಾಚಿಸಿದರು. ಸಲಹಾ ಸಮಿತಿ ಸದಸ್ಯ ಡಾ| ಆರ್.ಕೆ ಶೆಟ್ಟಿ, ಕಾರ್ಯಕ್ರಮ ನಿರೂಪಿಸಿದರು. ಸಲಹಾ ಸಮಿತಿ ಸದಸ್ಯ ಡಾ| ಸುರೇಶ್ ಎಸ್.ರಾವ್ ವಂದಿಸಿದರು.

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಇದರ ವ್ಯವಸ್ಥಾಪಕ ಸಮಿತಿ/ವಿಶೇಷ ಆಹ್ವಾನಿತರು/ ಸಲಹಾ ಮಂಡಳಿಯ ಸದಸ್ಯರ ಪ್ರಶಸ್ತಿ ಸಮಾರಂಭದ ಫೋಟೋಗಳು.

LEAVE A REPLY

Please enter your comment!
Please enter your name here