ಪತ್ರಕರ್ತರ ದಿನಾಚರಣೆ ಸಂಭ್ರಮಿಸಿದ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ
ಪತ್ರಕರ್ತರು ಅಂದರೆ ಘನತೆ ಮತ್ತು ಮಾನ್ಯತೆ : ಸಚಿವ ನಾರಾಯಣ ಗೌಡ

ಮುಂಬಯಿ, ಜು.10: ಅಭಿವ್ಯಕ್ತ ಸ್ವಾತಂತ್ರ್ಯದ ದೇಶವಾದ ಭಾರತದಲ್ಲಿ ರಾಷ್ಟ್ರದ ನಾಲ್ಕನೇ ಅಂಗವಾಗಿ ಪತ್ರಿಕಾ ಮಾಧ್ಯಮವು ಕಾರ್ಯನಿರ್ವಹಿಸುತ್ತಿರುವುದು ಭಾರತೀಯ ಪತ್ರಕರ್ತರ ಹಿರಿಮೆಯಾಗಿದೆ. ನಮ್ಮ ಪ್ರಜಾಪ್ರಭುತ್ವ ರಾಷ್ಟ್ರದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ವ್ಯವಸ್ಥೆಯನ್ನು ತಿದ್ದಿ ಸಮಾಜದ ಹಿತ ಕಾಪಾಡುವಲ್ಲಿ ಶ್ರಮಿಸುವ ಪತ್ರಕರ್ತರು ಸಮಾಜದ ಮೂರನೇ ಕಣ್ಣು ಎಂದೇ ಗುರುತಿಸಲ್ಪಟ್ಟಿದ್ದಾರೆ. ಪತ್ರಕರ್ತರು ಸಮಾಜಕ್ಕೆ ನ್ಯಾಯವನ್ನು ಒದಗಿಸುವ ಪ್ರತಿಷ್ಠಿತ ಪ್ರಜೆಗಳಾಗಿದ್ದಾರೆ. ಆದ್ದರಿಂದ ಪತ್ರಕರ್ತರು ಅಂದರೆ ಘನತೆ, ಮಾನ್ಯತೆಗೆ ಪಾತ್ರದಾಯಕರಾಗಿದ್ದಾರೆ. ಇಂತಹ ಪತ್ರಕರ್ತರು ಯಾವುದೇ ವಕ್ತಿಗತವಾದ ವಿಷಯವನ್ನು ತಮ್ಮ ಬರವಣಿಗೆಯಲ್ಲಿ ತೋರದೆ ವಸ್ತುನಿಷ್ಠವಾದ ವರದಿಗಾರಿಕೆಗೆ ಮಹತ್ವ ನೀಡಬೇಕು. ಸತ್ಯ ಹೇಳಿ ಸಮಾಜವನ್ನು ಎಚ್ಚರಿಸುವಲ್ಲಿ ಎಂದೂ ಪತ್ರಕರ್ತರು ಹಿಂಜರಿಯಬಾರದು ಎಂದು ಕರ್ನಾಟಕ ಸರ್ಕಾರದ ಕ್ರೀಡೆ, ಯುವ ಸಬಲೀಕರಣ, ರೇಷ್ಮೆ, ಯೋಜನೆ, ಅಂಕಿಅಂಶ ಖಾತೆಗಳ ಸಚಿವ ಡಾ| ಕೆ.ಸಿ.ನಾರಾಯಣ ಗೌಡ ತಿಳಿಸಿದರು.

ಇಂದಿಲ್ಲಿ ಭಾನುವಾರ ಪೂರ್ವಾಹ್ನ ಅಂಧೇರಿ ಪೂರ್ವದ ಸಾಲೀಟರಿ ಕಾರ್ಪೊರೇಟ್ ಪಾರ್ಕ್ ಇದರ ಕ್ಲಬ್ ಹೌಸ್‍ನ ಸಭಾಗೃಹದಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಭ್ರಮಿಸಿದ ಪತ್ರಕರ್ತರ ದಿನಾಚರಣಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಸಚಿವ ನಾರಾಯಣ ಗೌಡ ತಿಳಿಸಿದರು.

ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಪೋ | ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಮುಖ್ಯ ಅತಿಥಿ ಆಗಿದ್ದು, ಅಲ್ಡೇಲ್ ಎಜ್ಯುಕೇಶನ್ ಟ್ರಸ್ಟ್ ಮತ್ತು ಮೋಡೆಲ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲ್ಯೂ ಡಿ’ಸೋಜಾ, ಬಂಟ್ಸ್ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಲತಾ ಜಯರಾಮ ಶೆಟ್ಟಿ (ರಿಜೇನ್ಸಿ), ಭಾರತ್ ಬ್ಯಾಂಕ್ ಲಿಮಿಟೆಡ್‍ನ ನಿರ್ದೇಶಕ ಸೂರ್ಯಕಾಂತ್ ಜೆ.ಸುವರ್ಣ ಗೌರವ ಅತಿಥಿಗಳಾಗಿ ವೇದಿಕೆಯಲ್ಲಿದ್ದರು.

ಪತ್ರಕರ್ತರ ಸಂಘದ ಹದಿನೈದನೇ ವಾರ್ಷಿಕೋತ್ಸವದ ಲಾಂಛನ ಬಿಡುಗಡೆ ಗೊಳಿಸಿ ಮಾತನಾಡಿದ ಪೋ | ಯಡಪಡಿತ್ತಾಯ ಸಂವಿಧಾನದ ನಾಲ್ಕನೇ ಅಂಗವಾಗಿರುವ ಪತ್ರಿಕೋದ್ಯಮ ಬಹಳ ಗೌರವಯುತ ವೃತ್ತಿಯಾಗಿದೆ. ಸಮಾಜದ ನಡೆನುಡಿಗಳನ್ನು ರೂಪಿಸುವಲ್ಲಿ ಮಹತ್ವಪೂರ್ಣವಾದ ಪಾತ್ರ ಪತ್ರಿಕಾರಂಗ ವಹಿಸುತ್ತಾ ಬಂದಿದೆ. ಪ್ರಸ್ತುತ ಸ್ಪರ್ಧಾ ಜಗತ್ತು ಮತ್ತು ಪೈಪೆÇೀಟಿ ಯುಗದಲ್ಲಿ ಓದುಗರ, ವೀಕ್ಷಕರನ್ನು ಆಕರ್ಷಿಸುವಲ್ಲಿ ಮಾಧ್ಯಮಗಳು ಧಾವಂತದಲ್ಲಿದ್ದರೂ ಪತ್ರಕರ್ತರ ಬರವಣಿಗೆ ನ್ಯಾಯ ಸಮ್ಮತವಾಗಿರಲಿ. ನೈತಿಕ ಮೌಲ್ಯಗಳನ್ನು ಪ್ರದರ್ಶಿಸುವ ಮೂಲಕ ಆಕರ್ಷಿಸಿದಾಗಲೇ ಮಾಧ್ಯಮಗಳು ಪ್ರತಿಷ್ಠೆಯುಳ್ಳವು ಆಗುತ್ತವೆ. ಸುದ್ದಿ ಬಿತ್ತನೆ ಮಾಡುವಾಗ ಸತ್ಯಕ್ಕಿಂತ ದೂರವಾಗಿರಿಸದೆ ಸತ್ಯವಾಗಿಸಬೇಕು. ಅದು ನಿಖರವಾಗಿದ್ದು ಎಲ್ಲೂ ಗೊಂದಲಮಯವಾದ ವಾತಾವರಣ ಸೃಷ್ಟಿಸದಂತಿರಲಿ. ವಸ್ತುನಿಷ್ಠತೆ ಬಹಳ ಮುಖ್ಯ. ಮುಡಿಯಿಂದ ಅಡಿಯ ತನಕ ವಸ್ತುನಿಷ್ಠತೆ ಇರಬೇಕು. ಇಲ್ಲಂದ್ರೆ ಆ ಸುದ್ದಿಗೆ ಬೆಲೆಯಿಲ್ಲ. ಸುದ್ದಿಗಳು ಸಕಾಲೀಕವಾಗಿದ್ದು ಸಾಮಾಜಿಕ ಮುಖವನ್ನು ಕೂಡಾ ಅರ್ಥ ಮಾಡಿಕೊಂಡಾಗಲೇ ಅದು ಓದುಗರ ಕೈಗನ್ನಡಿ ಆಗುವುದು ಎಂದರು.

ಬೆಳಗ್ಗಿನ ಜಾವ ಕನ್ನಡ ಪತ್ರಿಕೆಗಳನ್ನು ವಾಚಿಸುವುದು ಇಂದಿಗೂ ಹವ್ಯಾಸವಾಗಿಸಿದ್ದೇನೆ. ಕಾರಣ ಮಾತೃಭಾಷಾ ಮಾಧ್ಯಮಗಳಿಂದ ಮಾತ್ರ ಮನಸ್ಸನ್ನು ಹಿತವಾಗಿಸಲು ಸಾಧ್ಯವಾಗುವುದು. ಪತ್ರಿಕಾ ಮಾಧ್ಯಮವು ಇಂದಿಗೂ ಶಕ್ತಿಶಾಲಿ ಸಂಪರ್ಕಸಾಧನವಾಗಿದ್ದು ಪತ್ರಕರ್ತರು ಇಂತಹ ವೃತ್ತಿಯನ್ನು ಸರಿಯಾದ ಮತ್ತು ನ್ಯಾಯಸಮ್ಮತವಾಗಿ ಬಳಸಿಕೊಂಡಾಗ ಸಮಾಜವೇ ಆರೋಗ್ಯದಾಯಕವಾಗುವುದು. ಮಾಧ್ಯಮ ರಂಗದ ಉದ್ಯೋಗಿಗಳ ಜೀವನವು ತುಂಬಾ ಅಪಾಯಕ ಮತ್ತು ಸಂಕಷ್ಟಕಾರಿ ಅಂದೆಣಿಸಿದರೂ ಪತ್ರಕರ್ತರು ಅದನ್ನು ನಿಭಾಯಿಸಿ ಓದುಗರ ಮನಗೆಲ್ಲುವುದೇ ಪತ್ರಕರ್ತರ ಪ್ರತಿಷ್ಠೆಯಾಗಿದೆ ಎಂದು ಆಲ್ಬರ್ಟ್ ಡಿ’ಸೋಜಾ ತಿಳಿಸಿದರು.

ಹೊರನಾಡ ಕರ್ಮಭೂಮಿಯಲ್ಲಿ ವೃತ್ತಿಬದುಕಿನ ಜೊತೆಗೆ ಕನ್ನಡ ಪತ್ರಕರ್ತರದ್ದೇ ಸಂಘಟನೆಯನ್ನು ರೂಪಿಸಿ ಹದಿನೈದನೇ ವಾರ್ಷಿಕೋತ್ಸವದ ಸಡಗರದಲ್ಲಿರುವ ಪತ್ರಕರ್ತರ ಸಂಘಕ್ಕೆ ನನ್ನ ಅಭಿನಂದನೆಗಳು. ಪತ್ರಕರ್ತರು ಜನರ ವಿಶ್ವಾಸಕ್ಕೆ ದ್ರೋಹ ಬಗ್ಗೆಯದಂತೆ ನಡೆದುಕೊಳ್ಳುವ ಅನಿವಾರ್ಯವಿದೆ. ಆದುದರಿಂದ ಪತ್ರಿಕೆಗಳ ಜೊತೆಜೊತೆಗೆ ಪತ್ರಕರ್ತರೂ ಜನರಲ್ಲಿ ಇನ್ನೂ ವಿಶ್ವಾಸ ಉಳಿಸಿಕೊಂಡು ಪತ್ರಿಕೋದ್ಯಮ ದ ಘನತೆ ಕಾಪಾಡಿ ಕೊಳ್ಳಬೇಕು. ಇಂದು ಎಲ್ಲ ರಂಗಗಳೂ ಕಲುಷಿತ ಗೊಂಡಂತೆ ಪತ್ರಿಕಾರಂಗವೂ ಮಲಿನಗೊಳ್ಳುತ್ತಿರುವ ಬಗ್ಗೆ ನಾಗರೀಕರು ಅಸಮಾಧಾನ ಪಡುತ್ತಿರುವುದು ಕಾಣುತ್ತಿದೆ. ಆದರೆ ಮುಂಬಯಿವಾಸಿ ಪತ್ರಕರ್ತರು ಅದೆಷ್ಟೋ ವಾಸಿ ಅನ್ನಿಸುತ್ತಿದೆ ಎಂದು ಲತಾ ಶೆಟ್ಟಿ ನುಡಿದರು.

ಹೊರನಾಡ ಮಹಾರಾಷ್ಟ್ರದಲ್ಲಿ ಕನ್ನಡಿಗ ಪತ್ರಕರ್ತರ ಐಕ್ಯತೆಗೆ ಈ ಪತ್ರಕರ್ತರ ದಿನಾಚರಣೆ ಉತ್ಸಹ ತುಂಬಿದೆ. ಬಹುಪಾಲು ಸದಸ್ಯರ ಭಾಗವಹಿಸುವಿಕೆ ಸಂಘದ ತಾಕತ್ತನ್ನು ಪ್ರದರ್ಶಿಸಿದೆ. ಮುಂದಿಯೂ ಸಂಘವು ಸದಸ್ಯರ ಪಾಲಿನ ಆಶಾಕಿರಣವಾಗಿ ಎಲ್ಲರ ಪಾಲಿನ ಮಾದರಿ ಸಂಸ್ಥೆಯಾಗಿ ಬೆಳೆಯುತ್ತಿರಲಿ ಎಂದÀು ಅಧ್ಯಕ್ಷೀಯ ಭಾಷಣದಲ್ಲಿ ರೋನ್ಸ್ ಬಂಟ್ವಾಳ್ ತಿಳಿದರು.

ಕಾರ್ಯಕ್ರಮದಲ್ಲಿ ಸಂಘದ ಸಲಹಾಗಾರರಾಗಿದ್ದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಾಳಿನ ತೊಂಬತ್ತರ ಸಂಭ್ರಮದ ಡಾ| ಸುನೀತಾ ಎಂ ಶೆಟ್ಟಿ, ಎಎಂಸಿ ಸಂಸ್ಥೆಯಿಂದ `ಸರ್ವೋತ್ಕೃಷ್ಟ ತಜ್ಞ’ ಪ್ರಶಸ್ತಿಗೆ ಭಾಜನರಾದ ಡಾ| ಸುರೇಶ್ ಎಸ್. ರಾವ್ ಕಟೀಲು, ಉಪರಾಷ್ಟ್ರಪತಿ ಡಾ| ವೆಂಕಯ್ಯ ನಾಯ್ಡು ಅವರಿಂದ ಜಾಗತಿಕ ಭಾರತೀಯ ಸಾಧಕ ಪ್ರಶಸ್ತಿ ಪುರಸ್ಕೃತ ಡಾ| ಆರ್.ಕೆ ಶೆಟ್ಟಿ, ಅರ್ವತ್ತರ ಷಷ್ಠ ್ಯಪೂರ್ತಿ ಸಂಭ್ರಮಿಸಿದ ಡಾ| ಶಿವರಾಮ ಕೆ.ಭಂಡಾರಿ, ಪೊಲೀಸ್ ಮಿತ್ರ್ ಸಂಘಟನ್ ನವ ದೆಹಲಿ (ಭಾರತ) ಇದರ ನವಿ ಮುಂಬಯಿ ಜಿಲ್ಲಾ ಪ್ರಮುಖರಾಗಿ ನಿಯುಕ್ತಿಗೊಂಡ ಡಾ| ಶಿವ ಮೂಡಿಗೆರೆ ಇವರಿಗೆ ವಿಶೇಷವಾಗಿ ಗೌರವಿಸಲಾಯಿತು.

ಸಂಘದ ಸದಸ್ಯರಾಗಿದ್ದು ಗತಸಾಲಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಸಂತೋಷ್ ದೇವಾಡಿಗ ಮತ್ತು ಸುಮನಾ ದೇವಾಡಿಗ ದಂಪತಿಗೆ, ಪ್ರತಿಭಾನ್ವಿತ ವಿದ್ಯಾರ್ಥಿ ರಾಘವೇಂದ್ರ ದಯಾನಂದ ಸಾಲ್ಯಾನ್ ಇವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಪತ್ರಕರ್ತರ ಸಂಘದ ಗೌರವ ಕಾರ್ಯದರ್ಶಿ ರವೀಂದ್ರ ಶೆಟ್ಟಿ ತಾಳಿಪಾಡಿ, ಸಲಹಾ ಸಮಿತಿ ಸದಸ್ಯರಾದ ಸುರೇಂದ್ರ ಎ.ಪೂಜಾರಿ, ಗ್ರೇಗೋರಿ ಡಿ’ಅಲ್ಮೇಡಾ, ಪಂಡಿತ್ ನವೀನ್‍ಚಂದ್ರ ಆರ್.ಸನೀಲ್, ಸುಧಾಕರ್ ಉಚ್ಚಿಲ್, ವಿಶೇಷ ಆಮಂತ್ರಿತ ಸದಸ್ಯರಾದ ಸಾ.ದಯಾ, ಸಿಎ| ಜಗದೀಶ್ ಬಿ.ಶೆಟ್ಟಿ ಸುರತ್ಕಲ್, ಹಿತೈಷಿಗಳಾದ ಲಕ್ಷ್ಮಣ್ ಸಿ.ಪೂಜಾರಿ (ಎನ್‍ಸಿಪಿ), ನಿರಂಜನ್ ಎಲ್.ಪೂಜಾರಿ, ಸುರೇಶ್ ಎಸ್.ಸಾ ಲ್ಯಾನ್ ಸೇರಿದಂತೆ ಸದಸ್ಯರನೇಕರು ಹಾಜರಿದ್ದರು.

ವಿಶ್ವನಾಥ್ ದೊಡ್ಮನೆ ಪ್ರಾರ್ಥನೆಯನ್ನಾಡಿದರು. ಉಪಾಧ್ಯಕ್ಷ ರಂಗ ಎಸ್.ಪೂಜಾರಿ ಸ್ವಾಗತಿಸಿದರು. ನಿತ್ಯಾನಂದ ಡಿ.ಕೋಟ್ಯಾನ್ ಪ್ರಸ್ತಾವನೆಗೈದರು. ಪತ್ರಕರ್ತರ ಭವನ ಸಮಿತಿ ಕಾರ್ಯಾಧ್ಯಕ್ಷ ಡಾ| ಶಿವ ಮೂಡಿಗೆರೆ ಪುರಸ್ಕೃತರನ್ನು ಪರಿಚಯಿಸಿದರು. ಗೌ| ಕೋಶಾಧಿಕಾರಿ ನಾಗೇಶ್ ಪೂಜಾರಿ ಏಳಿಂಜೆ, ವಿಶ್ವನಾಥ್ ಪೂಜಾರಿ ನಿಡ್ಡೋಡಿ, ಅನಿತಾ ಪಿ.ಪೂಜಾರಿ ತಾಕೋಡೆ, ವಿದ್ಯಾ ಎಂ.ಭಂಡಾರಿ, ಸವಿತಾ ಎಸ್.ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಗೋಪಾಲ್ ತ್ರಾಸಿ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕೋಶಾಧಿಕಾರಿ ಡಾ| ಜಿ.ಪಿ ಕುಸುಮಾ ಆಭಾರ ಮನ್ನಿಸಿದರು.

LEAVE A REPLY

Please enter your comment!
Please enter your name here