ಮುಂಬಯಿ, ಸೆ.24: ಪತ್ರಕರ್ತರಲ್ಲಿನ ಧನಾತ್ಮಕ ಚಿಂತನೆಗಳು ಎಂದಿಗೂ ಸಮಾಜದ ಹಿತಕ್ಕೆ ವರವಾಗುವುದು. ಆದುದರಿಂದ ಪತ್ರಕರ್ತರು ಸಾಮಾಜಿಕಪ್ರಜ್ಞೆ ರೂಢಿಸಿಕೊಳ್ಳಬೇಕು. ವಸ್ತುನಿಷ್ಠೆ, ವಿಶಾಲ ಮನೋಭಾವ, ಆಸಕ್ತಿ, ಶ್ರದ್ಧೆ ಮತ್ತು ಬದ್ಧತೆಗಳು ವ್ಯಕ್ತಿಯ ಪ್ರತಿಷ್ಠೆ ಮತ್ತು ಪ್ರಗತಿಗೆ ಆಸರೆ ಆಗಿರುವುದರಿಂದ ನಮ್ಮಲ್ಲಿನ ಸೇವಾಧರ್ಮ ವೃದ್ಧಿಸಿಕೊಂಡು ಸಮಾಜದ ವಿಶ್ವಾಸಕ್ಕೆ ಪತ್ರಕರ್ತರು ಪಾತ್ರರಾಗಬೇಕು. ಅನಾಚಾರಿ, ಪುಕ್ಕೆಲರು ಪತ್ರಕರ್ತರಾಗಲು ಯೋಗ್ಯರಲ್ಲ ಎಂದು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಅಧ್ಯಕ್ಷ ರೋನ್ಸ್ ಬಂಟ್ವಾಳ್ ಕರೆಯಿತ್ತರು.
ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ನಗರದ ಬಾಂದ್ರಾ ಪೂರ್ವದ ಖೇರ್ವಾಡಿ ಅಲ್ಲಿನ ರಾಜಯೋಗ್ ಹೊಟೇಲು ಸಭಾಗೃಹದಲ್ಲಿ ಕನ್ನಡಿಗ ಪತ್ರಕರ್ತರ ಸಂಘ ತನ್ನ ಹನ್ನೊಂದ್ತನೇ ವಾರ್ಷಿಕ ಸರ್ವ ಸಾಧಾರಣಾ ಸಭೆ ನಡೆಸಿದ್ದು ಸಭೆಯ ಅಧ್ಯಕ್ಷತೆ ವಹಿಸಿ ರೋನ್ಸ್ ಬಂಟ್ವಾಳ್ ಮಾತನಾಡಿದರು.
ನಾನೋರ್ವ ಹವ್ಯಾಸಿ ಪತ್ರಕರ್ತನಾಗಿದ್ದು ನನ್ನ ಶಿಸ್ತು, ಬದ್ಧತೆಯ ಚೌಕಟ್ಟಿನಲ್ಲೇ ಬದುಕು ಕಟ್ಟಿಕೊಂಡವ. ಪುಡಿಕಾಸಿನಲ್ಲೇ ಮುಂಬಯಿ ಸೇರಿದವನಾಗಿದ್ದರೂ ನ್ಯಾಯಕ್ಕಾಗಿ ಯಾವೊತ್ತೂ ಹೆದರಿ ನಿಂತವನಲ್ಲ. ಪ್ರಾಮಾಣಿಕತೆ, ಸತ್ಯಧರ್ಮ, ಪಾರದರ್ಶಕತ್ವವೇ ನನ್ನ ಜೀವನವಾಗಿದೆ. ಸೇವೆಯಿಂದ ಸಾಮಾಜಿಕಪ್ರಜ್ಞೆ ಮೂಡಿ ಅಹಂಕಾರ ನಿರಸನವಾಗಿ ಮನಶಾಂತಿ, ನೆಮ್ಮದಿಯೂ ಪ್ರಾಪ್ತಿಸುತ್ತಿದೆ ಎಂದು ತಿಳಿದವ. ನಮ್ಮಲ್ಲಿನ ಸೇವಾಧರ್ಮ ಶ್ರೇಷ್ಠತೆಯನ್ನು ಕಾಪಾಡುತ್ತಿದ್ದು ಇಲ್ಲಿ ಸ್ವಪ್ರತಿಷ್ಠೆ, ಸ್ವಾರ್ಥ ಎಂದೂ ಕಾಣಿಸದು. ನಮ್ಮೊಳಗಿನ ಅಂತಸತ್ವ ಜಾಗೃತಗೊಳಿಸಿದಾಗ ನಾವು ಸ್ವತಃ ಬೆಳೆಯಲು ಸಾಧ್ಯವಾಗುವುದು. ಆದುದರಿಂದ ಸಮಾಜಕ್ಕೆ ಏನಾನ್ನಾದರೂ ಕೊಡಬೇಕೆನ್ನೆವುದು ನನ್ನ ಅಭಿಲಾಶೆ. ಅದರ ಫಲದಲ್ಲೊಂದು ಈ ಸಂಸ್ಥೆಯಾಗಿದೆ ಎಂದೂ ಬಂಟ್ವಾಳ್ ತಿಳಿಸಿದರು.
ಕಪಸಮ ಉಪಾಧ್ಯಕ್ಷ ರಂಗ ಎಸ್.ಪೂಜಾರಿ, ಗೌ| ಪ್ರ| ಅಶೋಕ ಎಸ್. ಸುವರ್ಣ, ಗೌ| ಕಾರ್ಯದರ್ಶಿ ರವೀಂದ್ರ ಶೆಟ್ಟಿ ತಾಳಿಪಾಡಿ, ಜೊತೆ ಕಾರ್ಯದರ್ಶಿ ಜಯರಾಮ ಎನ್.ಶೆಟ್ಟಿ , ಜೊತೆ ಕೋಶಾಧಿಕಾರಿ ಡಾ| ಜಿ.ಪಿ ಕುಸುಮಾ, ಪತ್ರಕರ್ತರ ಭವನ ಸಮಿತಿ ಕಾರ್ಯಾಧ್ಯಕ್ಷ ಡಾ| ಶಿವ ಮೂಡಿಗೆರೆ ವೇದಿಕೆಯಲ್ಲಿ ಆಸೀನರಾಗಿದ್ದು, ಅಶೋಕ ಎಸ್. ಸುವರ್ಣ ಸ್ವಾಗತಿಸಿ ಗತ ವಾರ್ಷಿಕ ಮಹಾಸಭೆ ವರದಿ ವಾಚಿಸಿದರು. ನಾಗೇಶ್ ಪೂಜಾರಿ ಏಳಿಂಜೆ ಗತ ವಾರ್ಷಿಕ ಲೆಕ್ಕಪತ್ರಗಳ ಮಾಹಿತಿ ನೀಡಿದರು. ರವೀಂದ್ರ ಶೆಟ್ಟಿ ತಾಳಿಪಾಡಿ ವಾರ್ಷಿಕ ಚಟುವಟಿಕೆಗಳ ಮಾಹಿತಿ ತಿಳಿಸಿದರು. ಶಿವ ಮೂಡಿಗೆರೆ ಸಂಘದ ಮುಂದಿನ ಕಾರ್ಯಚಟುವಟಿಕೆಗಳ ಮುನ್ನೋಟ ತಿಳಿಸಿದರು.
ನಂತರ ಸಂಘದ 2019-2020ನೇ ಸಾಲಿನ ಲೆಕ್ಕಪರಿಶೋಧಕರನ್ನಾಗಿ ಪ್ರತಿಷ್ಠಿತ ಚಾರ್ಟರ್ಡ್ ಎಕೌಂಟೆಂಟ್ ಸಿಎ| ಐ.ಆರ್ ಶೆಟ್ಟಿ ಎಂಡ್ ಕಂಪೆನಿ ಸಂಸ್ಥೆಯನ್ನೇ ಪುನಃರ್ ನೇಮಕ ಗೊಳಿಸಲಾಗಿ ಜವಾಬ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಐ.ಆರ್ ಶೆಟ್ಟಿ ಅವರನ್ನು ಕಪಸಮ ಪರವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.
ಸಭೆಯಲ್ಲಿ ಸಾಫಲ್ಯ ಸೇವಾ ಸಂಘ ಮುಂಬಯಿ ಇದರ ಧುರೀಣ, ಮಹಾನಗರದ ಹಿರಿಯ ಹೊಟೇಲು ಉದ್ಯಮಿ, ಸದಾನಂದ ಸಫಲಿಗ, ಬಾಲಿವುಡ್ ಚಲನಚಿತ್ರ ರಂಗದ ಹೆಸರಾಂತ ಕೇಶ ವಿನ್ಯಾಸಕ ಶಿವಾ’ಸ್ ಹೇರ್ ಡಿಝೈನರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಆಡಳಿತ ನಿರ್ದೇಶಕ, ಕಪಸಮ ಇದರ ಪೊಷಕ ಸದಸ್ಯ ಡಾ| ಶಿವರಾಮ ಕೆ. ಭಂಡಾರಿ, ನಿತ್ಯಾನಂದ ಡಿ.ಕೋಟ್ಯಾನ್, ಸಂಘದ ಸಲಹಾ ಸಮಿತಿ ಸದಸ್ಯರಾದ ಗ್ರೇಗೋರಿ ಡಿಅಲ್ಮೇಡಾ, ಪಂಡಿತ್ ನವೀನ್ಚಂದ್ರ ಆರ್.ಸನಿಲ್, ಸುಧಾಕರ್ ಉಚ್ಚಿಲ್, ವಿಶೇಷ ಆಮಂತ್ರಿತ ಸದಸ್ಯರಾದ ನ್ಯಾ| ವಸಂತ ಕಲಕೋಟಿ, ಸಾ.ದಯಾ, ಗೋಪಾಲ್ ತ್ರಾಸಿ ವಿಶೇಷವಾಗಿ ಉಪಸ್ಥಿತರಿದ್ದು ಐ.ಆರ್ ಶೆಟ್ಟಿ ಅವರನ್ನು ಸನ್ಮಾನಿಸಿದರು.
ಐ.ಆರ್ ಶೆಟ್ಟಿ ಮಾತನಾಡಿ ಇಂದಿನ ಈ ಸನ್ಮಾನವು ನನಗೆ ತುಂಬಾ ಅಭಿಮಾನ ಮತ್ತು ಸಂತೋಷ ತಂದೊದಗಿಸಿದೆ. ಇದೊಂದು ಅಂತಾರಾಷ್ಟ್ರೀಯ ಮಟ್ಟದ ಸನ್ಮಾನ ಎಂದೇ ಭಾವಿಸುವೆ. ದೇಶದ ಪ್ರಜಾಪ್ರಭುತ್ವದಲ್ಲಿ ಪತ್ರಕರ್ತರ ಸೇವೆ ಅತ್ಯಂತ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಆದುದರಿಂದ ಸಮಾಜದ ಹಿತಕ್ಕಾಗಿ ಪತ್ರಕರ್ತರು ಪ್ರಾಮಾಣಿಕರಾಗಿ ಶ್ರಮಿಸಬೇಕು. ಕಾನೂನುಬಾಹಿರ ಕೆಲಸಗಳಿಗೆ ಪೊತ್ಸಾಹ ನೀಡದೆ ಸಮಾಜ ಸುದಾರಣೆಯಲ್ಲಿ ತೊಡಗಿಸಿಕೊಳ್ಳಬೇಕು. ಈ ಸಂಘಕ್ಕೆ ನನ್ನ ಪೊತ್ಸಾಹ ಸದಾವಿದ್ದು ಸಂಘದ ಮುಂದಿನ ಕಾರ್ಯ ಚಟುವಟಿಕೆಗಳು ಸುಗಮವಾಗು ಸಾಗುತ್ತಾ ಸಂಘವು ಇನ್ನಷ್ಟು ಕೀರ್ತಿಶಾಲಿಯಾಗಿ ಬೆಳೆಯಲಿ ಎಂದರು.
ಸಂಘವು ಒಳ್ಳೆಯ ರೀತಿಯಲ್ಲಿ ಮುನ್ನಡೆಯಬೇಕಾದರೆ ಎಲ್ಲರೂ ಒಗ್ಗೂಡಿ ವಿಶ್ವಾಸದಿಂದ ಕೆಲಸ ಮಾಡಬೇಕು. ಸಂಘದಲ್ಲಿ ಕೆಲವೊಮ್ಮೆ ಕೆಲವರು ಮಾತ್ರ ಸಕ್ರೀಯರಾಗಿ ಬೇರೆ ಸದಸ್ಯರ ಕೆಲಸಗಳನ್ನೂ ಮಾಡುವುದು ಅನಿವಾರ್ಯ ಆಗುತ್ತದೆ. ಕ್ರಮೇಣ ಮನಸ್ತಪಗಳು ಹುಟ್ಟಿ ಬಿರುಕುಗಳು ಕಾಣುತ್ತವೆ. ಸಮಸ್ಯೆಗಳು ಬಂದಾಗ ಅದನ್ನು ಅದೇ ಸಮಯದಲ್ಲಿ ತಿದ್ದುಪಡಿಸಿ ಪರಿಹಾರ ಕೊಂಡುಕೊಳ್ಳಬೇಕು. ಇಲ್ಲದಿದ್ದರೆ ಮುಂದೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ. ಹಿಂದೆ ಆದ ವೈಮನಸ್ಸನ್ನು ಮರೆತು ಮುಂದೆ ನಡೆಯಬೇಕು ಅದರಲ್ಲಿ ಸಂಘದ ಅಭಿವೃದ್ಧಿ ಮತ್ತು ಪದಾಧಿಕಾರಿಗಳ ಪ್ರತಿಷ್ಠೆಯೂ ವೈಭವಿಸುತ್ತದೆ ಎಂದು ನಿತ್ಯಾನಂದ ಕೋಟ್ಯಾನ್ ಅಭಿಪ್ರಾಯ ಪಟ್ಟರು.
ಸಭೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾದ ವಿಶ್ವನಾಥ್ ಪೂಜಾರಿ ನಿಡ್ಡೋಡಿ, ಡಾ| ದಿನೇಶ್ ಶೆಟ್ಟಿ ರೆಂಜಾಳ, ನಾಗರಾಜ್ ಕೆ.ದೇವಾಡಿಗ, ಅಶೋಕ ಆರ್.ದೇವಾಡಿಗ, ಪ್ರೀತಮ್ ಎನ್. ದೇವಾಡಿಗ, ಜಯಂತ್ ಕೆ.ಸುವರ್ಣ, ವಿಶೇಷ ಆಮಂತ್ರಿತ ಸದಸ್ಯರಾದ ಸವಿತಾ ಎಸ್.ಶೆಟ್ಟಿ, ಕರುಣಾಕರ್ ವಿ.ಶೆಟ್ಟಿ ಸೇರಿದಂತೆ ಸಂಘದ ಬಹುತೇಕ ಸದಸ್ಯರು ಹಾಜರಿದ್ದು ವಿಶೇಷವಾಗಿ ಉಪಸ್ಥಿತರಿದ್ದರು.
ಸದಸ್ಯರ ಪರವಾಗಿ ಸಾ.ದಯಾ, ಗೋಪಾಲ್ ತ್ರಾಸಿ, ಡಾ| ದಿನೇಶ್ ಶೆಟ್ಟಿ ರೆಂಜಾಳ, ಮೋಹನ್ ಎಸ್.ರೆಡ್ಡಿ ಮಾತನಾಡಿ ಸಂಘದ ಉನ್ನತಿಗಾಗಿ ಸಲಹೆಗಳನ್ನಿತ್ತು ಸಲಹಿದರು. ವಿಶೇಷವಾಗಿ ಉಪಸ್ಥಿತ ಸಂಘದ ಸಕ್ರೀಯ ಸದಸ್ಯರಾದ ಹರೀಶ್ ಮೂಡಬಿದ್ರಿ (ಪುಣೆ), ಆರೀಫ್ ಕಲಕಟ್ಟಾ ಮಂಗಳೂರು ಮತ್ತಿತರ ಗಣ್ಯರಿಗೆ ಪುಷ್ಫಗುಪ್ಚವನ್ನಿತ್ತು ಗೌರವಿಸಲಾಯಿತು. ಗತ ಸಾಲಿನಲ್ಲಿ ಅಗಲಿದ ಎಲ್ಲಾ ಪತ್ರಕರ್ತರಿಗೆ ಸಭೆಯ ಆದಿಯಲ್ಲಿ ಶ್ರದ್ಧಾಂಜಲಿ ಸಲ್ಲಿಲಾಯಿತು. ಜಯರಾಮ ಎನ್.ಶೆಟ್ಟಿ ಕೃತಜ್ಞತೆ ಸಲ್ಲಿಸಿದರು.