ಸಮಾಜಕ್ಕೆ ನ್ಯಾಯ ಒದಗಿಸುವಲ್ಲಿ ಮಾಧ್ಯಗಳ ಪಾತ್ರ ಹಿರಿದು : ಶಾಸಕ ಕೃಷ್ಣ ಹೆಗ್ಡೆ

ಮುಂಬಯಿ, ಡಿ.22: ತುಳು-ಕನ್ನಡಿಗರು ಸಾಧಕ ಸಮಾಜ ಸೇವಕರು. ತಾವು ಎಲ್ಲೆಲ್ಲೂ ನೆಲೆಸಿದರೂ ಅಲ್ಲಲ್ಲೇ ಲೋಕದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಸಂಸ್ಥೆಗಳನ್ನು ಹುಟ್ಟುಹಾಕುತ್ತಾರೆ. ಆ ಮುಖೇನ ತಮ್ಮ ಮತ್ತು ಸ್ಥಾನೀಯ ಜನತೆಯ ಸೇವೆಗೆ ಪೂರಕವಾಗಿ ಶ್ರಮಿಸಿ ಇತರರಿಗೆ ಮಾರ್ಗದರ್ಶಕರಾಗಿ ಬಾಳುವ ವೈಖರಿ ವಿಶಿಷ್ಟ್ಯವಾದದ್ದು. ತುಳು-ಕನ್ನಡಿಗರ ಬಾಳ್ವೆಯ ಉತ್ಸಹವವೇ ಅನನ್ಯವಾದದ್ದು. ಮಹಾರಾಷ್ಟ್ರದ ವಿಧಾನಸಭೆಗೆ ಅದರಲ್ಲೂ ಬೃಹನ್ಮುಂಬಯಿಂದ ನಾಲ್ವರು ಶಾಸಕರು ಆಯ್ಕೆಯಾಗುವಲ್ಲಿ ಕನ್ನಡ ಪತ್ರಕರ್ತರ ಸಹಯೋಗವೂ ಪ್ರಮುಖವಾಗಿದೆ ಎಂದು ಮಹಾರಾಷ್ಟ್ರ ರಾಜ್ಯದ ವಿಲೇಪಾರ್ಲೆ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಕೃಷ್ಣ ಎಸ್.ಹೆಗ್ಡೆ ಅಭಿಪ್ರಾಯಪಟ್ಟರು

ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ (ನೋ.) ಸಂಸ್ಥೆಯು ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದಲ್ಲಿ ಸಂಘದ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಪತ್ರಕರ್ತರ ಸಂಘದ `ಡೈಯರಿ-ಡಿರೆಕ್ಟರಿ 2014′ ಬಿಡುಗಡೆ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶಾಸಕ ಕೃಷ್ಣ ಹೆಗ್ಡೆ ಮಾತನಾಡಿದರು.

ಸಂಘವು ಪ್ರಕಾಶಿತ ತೃತೀಯ ದಿನಚರಿ ಪುಸ್ತಕ-ಮಾಹಿತಿಸೂಚಿ ಕೈಪಿಡಿ ಬಿಡುಗಡೆ ಗೊಳಿಸಿ ಮಾತನಾಡಿದ ಕೃಷ್ಣ ಹೆಗ್ಡೆ ನಾನು ಕೂಡಾ ಕರ್ಮಭೂಮಿಯಲ್ಲಿ ಮಹಾರಾಷ್ಟ್ರೀಯನ್ನರ ಮಧ್ಯೆ, ಗುಜರಾತಿ, ಅಲ್ಪಸಂಖ್ಯಾಕರ ಕ್ಷೇತ್ರದಲ್ಲಿ ಜನಪ್ರತಿನಿಧಿಯಾಗಿ ಶಾಸಕನಾಗಿದ್ದೇನೆ ಎಂದರೆ ನನಗೆನೇ ಆಶ್ಚರ್ಯವಾಗುತ್ತದೆ. ಕಾರಣ, ನ್ಯಾಯಕ್ಕಾಗಿನ ಹೋರಾಟ ಆ ಮೂಲಕ ಜನನಾಯಕರೆಣಿಸುವ ಸಾಧನೆ ತಮ್ಮ ಹುಟ್ಟುಗುಣವಾಗಿಯೇ ಬೆಳೆಸಿಕೊಂಡಿರುವಂತಿದೆ. ನನಗೆ ನೂರಾರು ಪತ್ರಕರ್ತ ಮಿತ್ರರಿದ್ದಾರೆ ಆದುದರಿಂದ ನಾನೂ ಕೂಡಾ ಅರೆಕಾಲಿಕ ಪತ್ರಕರ್ತನೆಂದೇ ಭಾವಿಸಿದ್ದೇನೆ. ಈ ಸಂಘವು ಪತ್ರಕರ್ತ ಐಡಿ ಕಾರ್ಡ್ ನೀಡಿದರೆ ಪೂರ್ಣಪ್ರಮಾಣದ ಪತ್ರಕರ್ತನಾಗುವ ಸಂಶಯವಿಲ್ಲ ಎಂದರು.

ನೂರಾರು ಹಗರಣಗಳನ್ನು ಬಯಲಿಗೆಳೆದು ಜನಸಾಮಾನ್ಯರಿಗೆ, ಸಮಾಜಕ್ಕೆ ನ್ಯಾಯ ಒದಗಿಸುವಲ್ಲಿ ಮಾಧ್ಯಗಳ ಪಾತ್ರ ಹಿರಿದಾಗಿದೆ. ಅದರಲ್ಲಿ ರಾಜಕಾರಣಿಗಳಿಗೆ ಅಸಮಾಧಾನವಾಗ ಬಹುದು ಆದರೆ ಸಮಾಜದ ಉದ್ಧಾರವಂತೂ ಖಂಡಿತಾ ಆಗುತ್ತದೆ. ಆದುದರಿಂದ ಪತ್ರಕರ್ತರು ನಿಷ್ಪಕ್ಷವಾಗಿ ಪತ್ರಿಕೋದ್ಯಮದ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ನನ್ನ ಪಕ್ಕದ ಕ್ಷೇತ್ರದಲ್ಲೇ ನಿಮ್ಮ ಸಂಘದ ಕನಸಿನ ಪತ್ರಕರ್ತರ ಭವನ ನಿರ್ಮಿಸುತ್ತಿರುವುದು ಅಭಿಮಾನ ಎಣಿಸುತ್ತಿದೆ. ನನ್ನ ಪಾಲಿನ 50,000 ರೂಪಾಯಿ ದೇಣಿಗೆಯನ್ನೂ ನೀಡುತ್ತೇನೆ. ನನ್ನ ಮಿತ್ರ ಶಾಸಕರಿಂದಲೂ ಪ್ರೋತ್ಸಹ ನೀಡಲು ಸಹಕರಿಸುತ್ತೇನೆ. ನಿಮ್ಮೆಲ್ಲಾ ಯೋಜನೆ-ಯೋಜನೆಗಳು ಫಪಲ್ರದವಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಎಲ್.ವಿ ಅಮೀನ್ ಮತ್ತು ಗೌರವ ಅತಿಥಿಗಳಾಗಿ ಯುವ ಉದ್ಯಮಿ ಶಿವ ಶೆಟ್ಟಿ ಮೂಡಿಗೆರೆ, ದೇವಾಡಿಗರ ಸಂಘ ಮುಂಬಯಿ ಅಧ್ಯಕ್ಷ ವಾಸು ಎಸ್.ದೇವಾಡಿಗ, ಎಸ್.ಎಂ ಶೆಟ್ಟಿ ಶೈಕ್ಷಣಿಕ ಸಂಸ್ಥೆಯ ಕಾರ್ಯಾಧ್ಯಕ್ಷ ಜಯರಾಮ ಎನ್.ಶೆಟ್ಟಿ ಮತ್ತು ಪತ್ರಕರ್ತರ ಸಂಘದ ಲೆಕ್ಕಪರಿಶೋಧಕ ಸಿಎ| ಉಳ್ಳೂರುಗುತ್ತು ಶಂಕರ್ ಎಂ.ಶೆಟ್ಟಿ ಉಪಸ್ಥಿತರಿದ್ದು ಸಲಹಾ ಸಮಿತಿಯ ಸದಸ್ಯರುಗಳಾಗಿ ನೇಮಿತ ಸುರೇಂದ್ರ ಎ.ಪೂಜಾರಿ ಮತ್ತು ಗ್ರೆಗೋರಿ ಡಿ’ಅಲ್ಮೇಡಾ ಹಾಗೂ ಸದಸ್ಯರಿಗೆ ಸದಸ್ಯತ್ವ ಗುರುತುಪತ್ರ (ಐಡಿ ಕಾರ್ಡ್) ಪ್ರದಾನಿಸಿದರು.

ಜೀವನೋಪಾಯಕ್ಕೆ ಮುಂಬಯಿಗೆ ಬಂದ ನನ್ನ ಬಂಧುಗಳಂತಿರುವ ಕನ್ನಡ ಪತ್ರಕರ್ತರಲ್ಲಿ ನನಗೆ ಅಪಾರ ಗೌರವವಿದೆ. ತಾವೆಲ್ಲರೂ ಪತ್ರಕರ್ತರಕ್ಕಿಂತಲೂ ಆತ್ಮೀಯತೆಯನ್ನು ಮೈಗೂಡಿಸಿ ಗೌರವವನ್ನು ನೀಡುತ್ತಿರುವುದು ಅಭಿಮಾನ ಎಣಿಸುತ್ತಿದೆ. ಸದಾ ಒಳಿತಿನ ಚಿಂತಕರಾದ ತಾವುಗಳು ಯಾವುದೇ ಪ್ರಚೋದನೆಗಳಿಗೆ ಒತ್ತು ನೀಡದೆ ಸಮಾಜ ಮತ್ತು ಜನರನ್ನು ಬೆಸೆಯುವ ಕೊಂಡಿಗಳಾಗಿ ಸೇವಾ ನಿರತರಾಗಿದ್ದೀರಿ. ನಾವೆನೂ ಅಲ್ಲದ ನಮಗೆ ನಮ್ಮಲ್ಲಿನ ಸೇವಾ ಮನೋಧರ್ಮವನ್ನು ಗುರುತಿಸಿ ಜನನಾಯಕರನ್ನಾಗಿಸಿದ್ದೀರಿ. ಇಂತಹ ಸ್ಪಂದನಾತ್ಮಕ ಪತ್ರಕರ್ತರು ರಾಷ್ಟ್ರದ ಮತ್ತೆಲ್ಲೂ ಸಿಗುವುದು ಅಪರೂಪ ಎಂದೆಣಿಸಿದ್ದೇನೆ. ನಿಮ್ಮ ಎಲ್ಲಾ ಆಶಯಗಳು ಇಂತಹ ಸಂಘದ ಮೂಲಕ ಈಡೇರಲಿ ಎಂದು ಎಲ್.ವಿ ಅಮೀನ್ ನುಡಿದರು.

ಶಿವ ಮೂಡಿಗೆರೆ ಮಾತನಾಡಿ ಪತ್ರಕರ್ತರ ಸಾಂಘಿಕ ಶಕ್ತಿಗೆ ಇಂತಹ ವೇದಿಕೆ ಪೂರಕವಾಗಿದೆ. ನಮಗೂ ಆದರ್ಶಪ್ರಾಯವಾದ ಈ ಸಂಘವು ಪತ್ರಕರ್ತರ ಶಕ್ತಿಯಾಗಿ ರೂಪುಗೊಳ್ಳಲಿ ಎಂದರು.

ಮಹಾರಾಷ್ಟ್ರದಲ್ಲಿನ ಪ್ರತಿಯೊಂದು ತುಳು-ಕನ್ನಡಿಗರ ಸಂಸ್ಥೆಗಳನ್ನು ಪೊಷಿಸಿ ಬೆಳೆಸುವಲ್ಲಿ ಕನ್ನಡ ಪತ್ರಕರ್ತರ ಕೊಡುಗೆ ಮಹತ್ವದ್ದಾಗಿದೆ. ತುಳು-ಕನ್ನಡಿಗರ ಸಮಸ್ಯೆಗಳನ್ನು ಸಂಬಂಧಿಕರಿಗೆ, ಸರಕಾರಕ್ಕೆ ತಿಳಿಸುವ ಕಾರ್ಯನಿರ್ವಹಿಸಿದ ಇಲ್ಲಿನ ಪತ್ರಿಕೆಗಳು ಬೆಳೆದಂತೆ ಸಮಾಜದ ಕನ್ನಡಿಯಾಗಿ ಈ ಕನ್ನಡ ಪತ್ರಕರ್ತರ ಸಂಘವೂ ಬೆಳೆಯಲಿ ಎಂದು ವಾಸು ದೇವಾಡಿಗ ನುಡಿದರು.

ಮುಂಬಯಿಯಲ್ಲಿನ ಕನ್ನಡ ಪತ್ರಕರ್ತರು ಒಳ್ಳೆಯ ಅಲೋಚನೆಗಾರರಾಗಿದ್ದಾರೆ. ಮಾಧ್ಯಮದ ಮೂಲಕ ಸಮಾಜವನ್ನು ಸದಾ ಜಾಗೃತರಾಗಿಸಿ ಸಮಾಜಪರ ಚಿಂತಕರಾಗಿ ಶ್ರಮಿಸುತ್ತಿದ್ದಾರೆ. ಕರ್ನಾಟಕದ ಜನತೆ ಮತ್ತು ಸಮಾಜದ ಸಂಬಂಧವನ್ನು ಸಮೀಪ್ಯಕ್ಕೆ ತರುವಲ್ಲಿ ಪ್ರಯತ್ನಿಸುವ ಕನ್ನಡಿಗ ಪತ್ರಕರ್ತರ ಸಂಘವು ಪತ್ರಕರ್ತರ ಶ್ರೇಯೋಭಿವೃದ್ಧಿಗಾಗಿ ರಾಷ್ಟ್ರದ ಆಥಿರ್üಕ ರಾಜಧಾನಿ ಬೃಹನ್ಮುಂಬಯಿಯಲ್ಲಿ ರಾಷ್ಟ್ರೀಯ ಮಾನ್ಯತೆ ಪಡೆದು ರಾಜ್ಯ ಮಟ್ಟದ ಸಂಘಟನೆಯಾಗಿ ಸೇವಾ ನಿರತವಾಗಿರುವುದು ಪ್ರಶಂಸನೀಯ ಇವರ ಸೇವೆಗೆ ತುಳು-ಕನ್ನಡಿಗರ ಪ್ರೋತ್ಸಹ  ಅಗತ್ಯವಾಗಿರಲಿ ಎಂದು ಜಯರಾಮ ಎನ್.ಶೆಟ್ಟಿ ಎಂದರು

ಮಹಾರಾಷ್ಟ್ರದಲ್ಲಿನ ಕನ್ನಡ ಪತ್ರಕರ್ತರು ಅಭಿಮಾನ ಪಡುವಂತಹ ಕಾಲವಿದು. ಒಂದನೆಯದಾಗಿ ಸಂಘವು ತೃತೀಯ ದಿನಚರಿ ಪುಸ್ತಕ-ಮಾಹಿತಿಸೂಚಿ ಕೈಪಿಡಿ ಪ್ರಕಾಶಿಸಿ ಕನ್ನಡ ಪತ್ರಕರ್ತರ ಅಸ್ಮಿತೆಯ ಸಾಂಘಿಕತೆಯನ್ನು ತೋರ್ಪಡಿಸಿದರೆ, ಎರಡನೇಯದು ತಮ್ಮ ಮಹತ್ವಕಾಂಕ್ಷೆಯ ಯೋಜನೆಯ ಪತ್ರಕರ್ತರ ಭವನವನ್ನು ಕರ್ಮಭೂಮಿಯಲ್ಲಿ ಮಾಧ್ಯಮ ಅನುಕೂಲತೆಗೆ ಸಿದ್ಧಗೊಳಿಸಿ ಸದಸ್ಯರುಗಳ ಹೆಚ್ಚುವರಿ ಸೇವೆಗೆ ತೊಡಗಿಸಿಕೊಳ್ಳುವ ಪರ್ವಕಾಲವಿದು. ಸಂಘದ ಉದ್ದೇಶಗಳನ್ನು ಪರಿಪೂರ್ಣವಾಗಿಸಿ ಫಲಾನುಭವ ಗಳಿಸಿಕೊಳ್ಳಲು ಸದಸ್ಯರ ಬೆಂಬಲ, ಪ್ರೋತ್ಸಹ , ಉತ್ತೇಜನವೂ ಅತ್ಯಗತ್ಯವಾಗಿದೆ. ಸಂಘದ ತೃತೀಯ ಮಹಾನ್ ಯೋಜನೆಯಾದ ಆರೋಗ್ಯನಿಧಿ ಬಳಕೆಯಾಗುವಂತೆಯೂ ಸದಸ್ಯರು ಸಂಸ್ಥೆಯನ್ನು ಬೆಳೆಸಲು ಕೈಜೋಡಿಸಬೇಕು ಎಂದು ಪಾಲೆತ್ತಾಡಿ ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಸದಸ್ಯರಿಗೆ ಕರೆಯಿತ್ತರು.

ಕಾರ್ಯಕ್ರಮದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಪಿಲಾರು ಸುರೇಶ್ ಆಚಾರ್ಯ, ಬಾಬು ಕೆ.ಬೆಳ್ಚಡ, ಶ್ಯಾಮ್ ಎಂ.ಹಂಧೆ, ಗುರುದತ್ತ್ ಎಸ್.ಪೂಂಜಾ ಮುಂಡ್ಕೂರು, ಲಾರೆನ್ಸ್ ಕುವೆಲ್ಲೋ, ಶ್ರೀಮತಿ ಸವಿತಾ ಎಸ್. ಶೆಟ್ಟಿ ಹಾಗೂ ಕ್ರೀಡಾ ಸಮಿತಿಯ ಕಾರ್ಯಧ್ಯಕ್ಷ ಜಯ ಸಿ.ಪೂಜಾರಿ, ವಿಶೇಷ ಆಮಂತ್ರಿತ ಸದಸ್ಯರುಗಳಾದ ನ್ಯಾ| ವಸಂತ ಎಸ್. ಕಲಕೋಟಿ, ಸಲಹಾ ಸಮಿತಿಯ ಸದಸ್ಯರುಗಳಾದ ನ್ಯಾ| ಬಿ.ಮೋಹಿದ್ಧೀನ್ ಮುಂಡ್ಕೂರು ಮತ್ತಿತರು ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷ ದಯಾಸಾಗರ್ ಚೌಟ ಸ್ವಾಗತಿಸಿದರು. ಕೋಶಾಧಿಕಾರಿ ಜಿ.ಪಿ.ಕುಸುಮಾ ಪ್ರಾರ್ಥನೆ ಗೈದರು. ಡಿರೆಕ್ಟರಿ ಪ್ರಕಾಶಕ-ಸಂಪಾದಕ ಮತ್ತು ಗೌ| ಪ್ರ| ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಪ್ರಸ್ತಾವಿಕ ನುಡಿಗಳನ್ನಾಡಿದರು. ಗೌ| ಕಾರ್ಯದರ್ಶಿ ಹರೀಶ್ ಕೆ.ಹೆಜ್ಮಾಡಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಜನಾರ್ಧನ ಎಸ್. ಪುರಿಯಾ ವಂದನಾರ್ಪಣೆಗೈದರು.

LEAVE A REPLY

Please enter your comment!
Please enter your name here