ಪತ್ರಕರ್ತರ ವೃತ್ತಿಜೀವನವೇ ಅವಿಶ್ರಾಂತಿತ : ಗಿರೀಶ್ ಶೆಟ್ಟಿ ತೆಳ್ಳಾರ್

ಮುಂಬಯಿ, ಜ.24: ಪತ್ರಕರ್ತರ ವೃತ್ತಿಜೀವನವೇ ಅವಿಶ್ರಾಂತ. ಅವರ ಖಾಸಾಗಿ ಜೀವನಕ್ಕೆ ತಪ್ಸೀಲು (ಶೆಡ್ಯೂಲ್) ಆ ಮಧ್ಯೆ ಇಂತಹ ಸ್ಪರ್ಧೆ, ಸ್ನೇಹಮಿಲನ ಅಭಿನಂದನೀಯ. ಪಂದ್ಯಾಟಗಳಿಂದ ಮನ ನೆಮ್ಮದಿ ಸಾಧ್ಯ. ಪತ್ರಕರ್ತರರ ಇಂತಹ ಕಾರ್ಯಕ್ರಮಗಳಿಗೆ ಸಹಕಾರ ಅವಶ್ಯವಾಗಿದೆ ಎಂದು ಬಂಟ್ಸ್ ಸಂಘ ಮುಂಬಯಿ ಇದರ ವಿೂರಾ ಭಯಂದರ್ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರ್ ನುಡಿದರು.

ಗಣರಾಜ್ಯೋತ್ಸವದ ಶುಭಾವಸರದಲ್ಲಿ ಭಯಂದರ್ ಪೂರ್ವದ ಭಾರತರತ್ನ ಸಚಿನ್ ತೆಂಡೂಲ್ಕರ್ ಮೈದಾನದಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯು ಇಂದಿಲ್ಲಿ ಶುಕ್ರವಾರ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾಟದ ಸಮಾಪನ ಕಾರ್ಯಕ್ರಮದಲ್ಲಿ ವಿಜೇತ ತಂಡಗಳಿಗೆ ಟ್ರೋಫಿ, ಬಹುಮಾನ ವಿತರಿಸಿ ಗಿರೀಶ್ ಎಸ್.ಶೆಟ್ಟಿ ತೆಳ್ಳಾರ್ ಮಾತನಾಡಿದರು.

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅಧ್ಯಕ್ಷತೆಯಲ್ಲಿ ಅಪರಾಹ್ನ ನಡೆಸಲ್ಪಟ್ಟ ಪಂದ್ಯಾಟದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಗಿರೀಶ್ ಶೆಟ್ಟಿ, ಗೌರವ ಅತಿಥಿಗಳಾಗಿ ವಿೂರಾ ಭಯಂದರ್ ಪ್ರಾದೇಶಿಕ ಸಮಿತಿ ಉಪ ಕಾರ್ಯಾಧ್ಯಕ್ಷ ಮುನ್ನಲಾಯಿಗುತ್ತು ಸಚ್ಚಿದಾನಂದ ಎಂ.ಶೆಟ್ಟಿ, ಉದ್ಯಮಿ ರವೀಂದ್ರ ಎಸ್.ಕರ್ಕೇರ, ಕಿಶೋರ್ ಕುಮಾರ್ ಕುತ್ಯಾರ್, ದಿನೇಶ್ ಶೆಟ್ಟಿ ಕಾಪು ಉಪಸ್ಥಿತರಿ ದ್ದು ಟ್ರಾಫಿ, ವಿಜೇತ ತಂಡಗಳಿಗೆ ಬಹುಮಾನಗಳನ್ನು ವಿತರಿಸಿ ಶುಭಾರೈಸಿದರು.

ನಮ್ಮಂತಹ ವ್ಯಕ್ತಿಗಳಿಗೆ ಪತ್ರಕರ್ತರ ಪ್ರೇರಣೆ ಮಹತ್ತರದ್ದಾಗಿದೆ. ಸಮಾಜಸೇವಕರ ಸೇವೆಯನ್ನು ಪತ್ರಕರ್ತರು ಸಮಾಜಕ್ಕೆ ತಿಳಿಸಿದಾಗಲೇ ನಮ್ಮ ಸೇವೆಗೆ ಪ್ರೋತ್ಸಹ ಬಲ ಬರುವುದು. ನನ್ನಂತಹ ಸಾವಿರಾರು ಯುವಕರ ಸೇವೆ, ಕಾರ್ಯಕ್ರಮಗಳನ್ನು ವರದಿ, ಬರವಣಿಗೆ ಮೂಲಕ ಜಗತ್ತಿಗೆ ತಿಳಿಸಿದ ಕಾರಣ ನಾವಿಂದು ಸಮಾಜವಾಹಿನಿಯಲ್ಲಿ ಗುರುತಿಸಿ ಕೊಂಡಿದ್ದೇವೆ. ತಮ್ಮಂತಹ ಅವಿರತ ಸೇವೆಗೆ ನಾವು ಋಣಿಯಾಗಿದ್ದು, ಭವಿಷ್ಯದಲ್ಲೂ ತಮ್ಮೆಲ್ಲರ ಸೇವೆ ತಮಗೆ ನೆಮ್ಮದಿ ತಂದು ತಮ್ಮ ಯೋಚಿತ ಯೋಜನೆಗಳೆಲ್ಲವೂ ಫಲಪ್ರದಗೊಳ್ಳಲಿ ಎಂದು ಸಚ್ಚಿದಾನಂದ್ ಶೆಟ್ಟಿ ತಿಳಿಸಿದರು.

ಪತ್ರಕರ್ತರಿಗೆ ವಿಶ್ರಾಂತಿದಿನ (ಬಿಡುವು) ಎನ್ನುವುದೇ ವಿರಳ. ಆದರೂ ಸಂಘದ ಸದಸ್ಯರಲ್ಲಿ ಏಕತೆಯನ್ನು ರೂಢಿಸುವಲ್ಲಿ ಪತ್ರಿಕಾಲಯಕ್ಕೆ ರಜೆಯಿರುವುದರಿಂದ ಗಣರಾಜ್ಯೋತ್ಸವದ ಸುದಿನ ಆಯ್ದು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದು ಸ್ಪರ್ಧೆಗಾಗಿ ಅಲ್ಲ ಸಾಮರಸ್ಯ, ಏಕೀಭಾವಕ್ಕಾಗಿ ರೂಪಿಸಲಾದ ಪಂದ್ಯಾಟ. ಇದು ಸದಸ್ಯರಲ್ಲಿ ಒಮ್ಮತ ಮೂಡಿಸಿ ಸಮಾಜಕ್ಕೂ ಆದರ್ಶವಾಗಲಿ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಪಾಲೆತ್ತಾಡಿ ತಿಳಿಸಿದರು.

ಪತ್ರಕರ್ತರ ಸಂಘದ ಕ್ರೀಡಾ ಸಮಿತಿ ಕಾರ್ಯಧ್ಯಕ್ಷ ಜಯ ಸಿ.ಪೂಜಾರಿ ಸಾರಥ್ಯದಲ್ಲಿ ಸಂಘದ ಸದಸ್ಯ ಉಮೇಶ್ ಕುಮಾರ್ ಅಂಚನ್ ಮುಂದಾಳುತ್ವದಲ್ಲಿ ನಡೆಸಲ್ಪಟ್ಟ ಕ್ರಿಕೆಟ್ ಪಂದ್ಯಾಟದಲ್ಲಿ ಡಾ| ಶಿವ ಎಂ.ಮೂಡಿಗೆರೆ ನಾಯಕತ್ವದ (ವಿದ್ಯಾ ಎಂ.ಭಂಡಾರಿ ವ್ಯವಸ್ಥಾಪಕಿ) ಪಿಂಕ್ ತಂಡವು ಪ್ರಥಮ ಸ್ಥಾನ ವಿಜೇತಗೊಂಡಿತು. ಬಾಬು ಕೆ.ಬೆಳ್ಚಡ ನಾಯಕತ್ವದ (ಸವಿತಾ ಎಸ್.ಶೆಟ್ಟಿ ವ್ಯವಸ್ಥಾಪಕಿ) ಯೆಲ್ಲೋ ತಂಡವು ದ್ವಿತೀಯ ಸ್ಥಾನ ತನ್ನದಾಗಿಸಿದರೆ ಸುರೇಶ್ ಶೆಟ್ಟಿ ಯೆಯ್ಯಾಡಿ ನಾಯಕತ್ವದ (ತಾರಾ ಆರ್.ಬಂಟ್ವಾಳ್ ವ್ಯವಸ್ಥಾಪಕಿ) ಬ್ಲೂ ತಂಡವು ಶಿಸ್ತಿನ ತಂಡವಾಗಿ ಟ್ರಾಫಿ ತನ್ನದಾಗಿಸಿತು.

ಅತ್ಯುತ್ತಮ ಚೆಂಡು ಎಸೆತಗಾರ ಮತ್ತು ಪಂದ್ಯಶ್ರೇಷ್ಠ (ಮ್ಯಾನ್ ಆಫ್ ದ ಮ್ಯಾಚ್) ಅಶೋಕ್ ಆರ್.ದೇವಾಡಿಗ, ಅತ್ಯುತ್ತಮ ದಾಂಡಿಗ ಮತ್ತು ಬೆಸ್ಟ್ ವಿಕೇಟ್ ಕೀಪರ್ ರಮೇಶ್‍ಎಂ.ಬಿಲ್ಲವ ಅತ್ಯುತ್ತಮ ರಕ್ಷಕ ಆಟಗಾರ ನಮ್ಮಟಿವಿಯ ಕರುಣಾಕರ್ ವಿ.ಶೆಟ್ಟಿ, ಕರ್ನಾಟಕ ಮಲ್ಲ ದೈನಿಕದ ರಾಘವೇಂದ್ರ ಆರ್.ಚಂದನ್ (ಯೆಲ್ಲೋ ತಂಡ), ಉದಯವಾಣಿ ದೈನಿಕದ ಪುರಂದರ್ ಜಿ.ಅವಿೂನ್ (ಪಿಂಕ್ ತಂಡ) ಪಂದ್ಯಶ್ರೇಷ್ಠ ಗೌರವಕ್ಕೆ ಹಾಗೂ ಸಂಘದ ಪತ್ರಕರ್ತರ ಭವನ ಸಮಿತಿ ಕಾರ್ಯಧ್ಯಕ್ಷ ಡಾ| ಶಿವ ಎಂ.ಮೂಡಿಗೆರೆ ವೈಯಕ್ತಿಕವಾಗಿ ಪ್ರದಾನಿಸಿದ ನಗದು ಬಹುಮಾನಕ್ಕೆ ಯಶಸ್ವೀ ಮಾಸಿಕದ ಸಂಪಾದಕ ಜಯರಾಮ ಎನ್.ಶೆಟ್ಟಿ ಮತ್ತು ಕರ್ನಾಟಕ ಮಲ್ಲದ ಅಶೋಕ್ ಆರ್.ದೇವಾಡಿಗ ಪಾತ್ರರಾದರು.

ಪತ್ರಕರ್ತರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್, ಗೌ| ಕೋಶಾಧಿಕಾರಿ ಪ್ರೇಮನಾಥ್ ಬಿ. ಶೆಟ್ಟಿ ಮುಂಡ್ಕೂರು ವೇದಿಕೆಯಲ್ಲಿ ಆಸೀನರಾಗಿದ್ದರು. ಸಂಘದ ಜತೆ ಕಾರ್ಯದರ್ಶಿ ಬಾಬು ಕೆ.ಬೆಳ್ಚಡ, ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ಯಾಮ್ ಎಂ.ಹಂಧೆ, ವಿಶ್ವನಾಥ್ ವಿ.ಪೂಜಾರಿ ನಿಡ್ಡೋಡಿ, ಡಾ| ದಿನೇಶ್ ಶೆಟ್ಟಿ ರೆಂಜಾಳ, ಸಲಹಾ ಸಮಿತಿ ಸದಸ್ಯ ಪಂ| ನವೀನ್‍ಚಂದ್ರ ಆರ್.ಸನೀಲ್ ಸೇರಿದಂತೆ ಸದಸ್ಯರನೇಕರು ಉಪಸ್ಥಿತರಿದ್ದು ಪಂದ್ಯಾಟದ ರೂವಾರಿ, ಕ್ರೀಡಾ ಸಮಿತಿ ಕಾರ್ಯಧ್ಯಕ್ಷ ಜಯ ಸಿ.ಪೂಜಾರಿ, ಸಂಘಟಕ ಉಮೇಶ್ ಕುಮಾರ್ ಅಂಚನ್ ಅವರನ್ನು ವಿಶೇಷವಾಗಿ ಸನ್ಮಾನಿಸಿ ಸ್ಮರಣಿಕೆಯೊಂದಿಗೆ ಸನ್ಮಾನಿಸಲಾಯಿತು. ಪಂದ್ಯಾಟಕ್ಕೆ ಕಾಮೆಂಟರಿ ನೀಡಿದ ವಿಶ್ವನಾಥ್ ಶೆಟ್ಟಿ (ಆರಾಧನಾ) ಮತ್ತು ಸುಭ್‍ದೀಪ್ ಶೆಟ್ಟಿ, ತೀರ್ಪುಗಾರರಾಗಿದ್ದ (ಎಂಪಾಯರ್) ಸಹಯೋಗವಿತ್ತ ರಮಾನಂದ ಪೂಜಾರಿ, ಶ್ರೀಕಾಂತ್ ಪೂಜಾರಿ, ಗಂಗಾಧರ್ ಪೂಜಾರಿ, ಪಂದ್ಯಾಟಕ್ಕೆ ಸಹಕರಿಸಿದ ಪ್ರಮೋದ್ ಕೆ.ಕೋಟ್ಯಾನ್, ನರೇಶ್ ಕೆ.ಪೂಜಾರಿ, ವಾಮನ್ ಸಾಲ್ಯಾನ್, ಆಶೋಕ್ ಶೆಟ್ಟಿ, ಸುಧಾಕರ್ ಪೂಜಾರಿ ಮತ್ತಿತರರನ್ನು ಗೌರವಿಸಲಾಯಿತು.

ಸಂಘದ ಉಪಾಧ್ಯಕ್ಷ ದಯಾ ಸಾಗರ್ ಚೌಟ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸವಿತಾ ಎಸ್.ಶೆಟ್ಟಿ, ವಿದ್ಯಾ ಎಂ.ಭಂಡಾರಿ, ತಾರಾ ಆರ್.ಬಂಟ್ವಾಳ್ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಮಾಪನ ಕಂಡಿತು.

LEAVE A REPLY

Please enter your comment!
Please enter your name here