ಮುಂಬಯಿ, ಆ.26: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ತನ್ನ 7ನೇ ವಾರ್ಷಿಕ ಮಹಾಸಭೆ ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಮಾಟುಂಗ ಪಶ್ಚಿಮದಲ್ಲಿನ ಕರ್ನಾಟಕ ಸಂಘ ಮುಂಬಯಿ ಇದರ ಸಮರಸ ಭವನದಲ್ಲಿ ಸಂಘದ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅವರ ಅಧ್ಯಕ್ಷತೆಯಲ್ಲಿ ಜರಗಿತು.

`ಸಂಘವು 6ವರ್ಷಗಳಲ್ಲಿ ಸಾಧಿಸಿದ್ದು ದೊಡ್ಡದಿರಬಹುದು ಆದರೆ ಒಟ್ಟಾರೆ ಸಂಘದ ಬಾಳ್ವೆಯ ಹಿನ್ನಲೆಯಲ್ಲಿ ನಾವು ಸಾಧಿಸ ಬೇಕಾದದ್ದೂ ಬಹಳವಿದೆ.ಸರ್ವರ ಏಕತಾ ಮನೋಭಾವದ ಚಿಂತನೆ ಒಗ್ಗೂಡಿದ್ದಲ್ಲಿ ಸದಸ್ಯರಿಗೆ ಸ್ವಂತ ನಿವೇಶನದ ಯೋಜನೆ ಸಂಘದ ಯೋಚಿಸಲಿದೆ. ಸಂಘವು ಕಳೆದ ಎಪ್ರಿಲ್‍ನಲ್ಲಿ ಆಯೋಜಿಸಿದ್ದ ರಾಷ್ಟ್ರದ ಪ್ರಪ್ರಥಮ ಅಖಿಲ ಭಾರತ ಕನ್ನಡಿಗ ಪತ್ರಕರ್ತರ ಸಮಾವೇಶವು ದೇಶಕ್ಕೇ ಮಾದರಿ. ಇದು ಮರಾಠಿ-ಕನ್ನಡಿಗರ ಬಾಂಧವ್ಯವನ್ನೂ ಬೆಸೆದಿದೆ. ಕನ್ನಡ-ಮರಾಠಿಗರ ಸಾಮರಸ್ಯದ ಬಾಳಿಗೂ ಪೂರಕವಾಗಿ ಆ ಮೂಲಕ ಸಂಘವು ಇತರ ಸಂಸ್ಥೆಗಳಿಗೂ ಪ್ರೇರಣೆಯನ್ನೀಡಿದೆ. ಸಂಘವು ವಿವಿಧ ಸ್ತರಗಳಲ್ಲಿ ಶ್ರಮಿಸಿ ಅತ್ಯುತ್ತಮ ಸಾಧನೆ ನಿರ್ವಹಿಸಿದೆ. ಈ ಹಿಂದೆ ಸಂಘದ ಸ್ಥಾಪಕ ರೂವಾರಿ ರೋನ್ಸ್ ಬಂಟ್ವಾಳ್ ಅವರ ಅನನ್ಯ ಶ್ರಮ ಪ್ರಶಂಸನೀಯ ಎಂದು ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಮಾತನಾಡಿ ಪಾಲೆತ್ತಾಡಿ ಪತ್ರಕರ್ತರಿಗೆ ತಿಳಿಸಿದರು.

ಸಭೆಯಲ್ಲಿ ಸಂಘದ 2015-2018ರ ಸಾಲಿನ ಕಾರ್ಯಕಾರಿ ಸಮಿತಿಗೆ 15 ಸದಸ್ಯರನ್ನು ಆಯ್ಕೆ ನಡೆಸಲಾಗಿದ್ದು, ಆಯ್ಕೆ ಯಾದಿಯನ್ನು ಚುನಾವಣಾಧಿಕಾರಿ ಆಗಿ ನ್ಯಾ| ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ ಬಹಿರಂಗ ಪಡಿಸಿದರು. ನ್ಯಾ| ಪ್ರಕಾಶ್ ಶೆಟ್ಟಿ ಮಾತನಾಡಿ `ಪತ್ರಕರ್ತ ಸಂಘದ ಐದಾರು ವರ್ಷಗಳ ಕಿರು ಅವಧಿಯ ಗಮನೀಯ ಸಾಧನೆ ಶ್ಲಾಘನೀಯವಾದದ್ದು. ಸದಸ್ಯರ ಹಿತಚಿಂತನೆ ಸಂಘದ ಪ್ರಧಾನ ಉದ್ದೇಶವಾಗಿದ್ದು ಅದನ್ನು ಪೂರೈಸಲು ಪ್ರಸ್ತುತ ಸಮಿತಿ ಸಶಕ್ತವಾಗಿದೆ. ಮುಂದಿನ ದಿನಗಳಲ್ಲೂ ಪತ್ರಕರ್ತರ ಭವನ, ಆಥಿರ್ಕ ಸ್ಥಿತಿಗತಿ, ಆರೋಗ್ಯದ ಕಾಳಜಿ ಬಗ್ಗೆ ಸಕ್ರೀಯ ಗೊಂಡು ಉಜ್ವಲ ಭವಿಷ್ಯದೊಂದಿಗೆ ಸಂಘದ ಕನಸಿನ ವಿಸ್ತಾರವಾದ ಯೋಜನೆಗಳು ಇನ್ನೂ ಮುನ್ನಡೆಯಲಿ’ಎಂದರು.

ಸಂಘದ ಸಂಸ್ಥಾಪಕಾ ಗೌ| ಪ್ರಧಾನ ಕಾರ್ಯದರ್ಶಿಯಾಗಿ ರೋನ್ಸ್ ಬಂಟ್ವಾಳ್ ಸ್ವಾಗತಿಸಿ ಸಂಸ್ಥೆಯ ಬೆಳವಣಿಗೆ ಮತ್ತು ಸಾಧಿಸಿದ ಕಾರ್ಯಚಟುವಟಿಕೆಗಳನ್ನು ತಿಳಿಸುತ್ತಾ `ಅಖಿಲ ಭಾರತ ಪತ್ರಕರ್ತರ ಸಮಾವೇಶ ನಡೆಸಿದ ನಮ್ಮ ಸಂಘವು ರಾಷ್ಟ್ರದಾದ್ಯಂತ ಮಾನ್ಯತೆ ಪಡೆದಿದೆ. ಆದರೆ ಸದಸ್ಯರ ಸಕ್ರೀಯತೆಯ ಕೊರತೆ ನೀಗಿಸುತ್ತಾ ಮುಂದಿನ ದಿನಗಳಲ್ಲಿ ಸಂಘವನ್ನು ಇನ್ನಷ್ಟು ಬಲಯುತ ಗೊಳಿಸಿ ಸದಸ್ಯರ ಶ್ರೇಯೋಭಿವೃದ್ಧಿಗಾಗಿ ನಾವು ಶ್ರಮಿಸಲಿದ್ದೇವೆ. ಸದಸ್ಯರೆಲ್ಲರೂ ಏಕ ಮನೋಭಾವದಿಂದ ಸಹಕರಿಸಿದ್ದಲ್ಲಿ ಶೀಘ್ರವೇ ಆರೋಗ್ಯಭಾಗ್ಯ ಕನಸನ್ನು ನನಸಾಗಿಸುವೆವು’ ಎಂದರು.

ಸಂಘದ 2015-2016ರ ಸಾಲಿನ ಲೆಕ್ಕಪರಿಶೋಧಕರನ್ನಾಗಿ ನಗರದ ಸುಪ್ರಸಿದ್ಧ ಚಾರ್ಟರ್ಡ್ ಎಕೌಂಟೆಂಟ್ ಸಿಎ| ಐ.ಆರ್ ಶೆಟ್ಟಿ ಎಂಡ್ ಅಸೋಶಿಯೇಟ್ಸ್ ಸಂಸ್ಥೆಯನ್ನೇ ಮರು ನೇಮಕ ಗೊಳಿಸಲಾಯಿತು. ಸಭಿಕರ ಪರವಾಗಿ ಜನಾ ರ್ದನ ರೈ.ಪುರಿಯಾ, ದೊಡ್ಡಯ್ಯ ಆರ್.ಸಾಲ್ಯಾನ್, ಪ್ರೇಮನಂದ ಆರ್.ಕುಕ್ಯಾನ್, ಡಾ| ದಿನೇಶ್ ಶೆಟ್ಟಿ ರೆಂಜಾಳ ಮಾತನಾಡಿ ಸಂಘದ ಸಾಧನೆ ಪ್ರಶಂಸಿಸಿ ಭವಿಷ್ಯತ್ತಿನ ಉನ್ನತಿಗಾಗಿ ಸಲಹೆ-ಸೂಚನೆಗಳನ್ನಿತ್ತು ಸಲಹಿ ಶುಭಾರೈಸಿದರು.

ಅಧ್ಯಕ್ಷ ಪಾಲೆತ್ತಾಡಿ ಅವರು ಚುನಾವಣಾಧಿಕಾರಿ ನ್ಯಾ| ಪ್ರಕಾಶ್ ಎಲ್.ಶೆಟ್ಟಿ, 2014ರ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರೋನ್ಸ್ ಬಂಟ್ವಾಳ್, ಡಾಕ್ಟರೇಟ್ ಪಡೆದ ಡಾ| ದಿನೇಶ್ ಶೆಟ್ಟಿ ರೆಂಜಾಳ, ಸಾಧಕರುಗಳಾದ ಶಿವ ಎಂ.ಮೂಡಿಗೆರೆ, ಡಾ| ಶಿವರಾಮ ಕೆ.ಭಂಡಾರಿ, ಸುರೇಶ್ ಶೆಟ್ಟಿ ಯೆಯ್ಯಾಡಿ ಮತ್ತು ಸಂಘದ ಯಶಸ್ಸಿಗೆ ಸಹಕರಿಸಿ ಗಣ್ಯರನ್ನು ಪುಷ್ಫಗುಪ್ಚವನ್ನಿತ್ತು ಗೌರವಿಸಿದರು. ಹಾಗೂ ಚಾರ್ಟರ್ಡ್ ಎಕೌಂಟೆಂಟ್ ಆಗಿ ಅನನ್ಯ ಮತ್ತು ಉಚಿತ ಸೇವೆಗೈಯುತ್ತಿರುವ ಸಿಎ| ಐ.ಆರ್ ಶೆಟ್ಟಿ ಮತ್ತು ಸಿಎ| ಶಂಕರ್ ಎಂ.ಶೆಟ್ಟಿ ಅವರನ್ನು ಸ್ಮರಿಸಿ ಅಭಿವಂದಿಸಿದರು.
ಸಭೆಯ ಆದಿಯಲ್ಲಿ ಗತ ಸಾಲಿನಲ್ಲಿ ಅಗಲಿದ ಎಲ್ಲಾ ಹಿರಿ-ಕಿರಿಯ ಪತ್ರಕರ್ತರ ಸೇವೆ ಸ್ಮರಿಸಿ ಅಗಲಿದ ಚೇತನಗಳಿಗೆ ಮೌನಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಜೊತೆ ಕಾರ್ಯದರ್ಶಿ ಪ್ರೇಮನಾಥ ಶೆಟ್ಟಿ ಮುಂಡ್ಕೂರು ಗತ ವಾರ್ಷಿಕ ಮಹಾಸಭೆಯ ವರದಿ ಭಿತ್ತರಿಸಿದರು. ಗೌ| ಕೋಶಾಧಿಕಾರಿ ಜಿ.ಪಿ.ಕುಸುಮ ಗತ ವಾರ್ಷಿಕ ಹಣಕಾಸು ಆಯವ್ಯಯ ಪಟ್ಟಿ ಮಂಡಿಸಿದರು. ಕಾರ್ಯಕಾರಿ ಸದಸ್ಯ ಬಾಬು ಕೆ.ಬೆಳ್ಚಡ ವಾರ್ಷಿಕ ವರದಿ ವಾಚಿಸಿದರು. ಉಪಾಧ್ಯಕ್ಷ ದಯಾಸಾಗರ್ ಚೌಟ ಸಾಧಕ ಸದಸ್ಯರ ಮಾಹಿತಿ ನೀಡಿದರು. ಕಾರ್ಯಕಾರಿ ಸದಸ್ಯ ಶ್ಯಾಮ ಎಂ.ಹಂಧೆ ಕೃತಜ್ಞತೆ ಸಮರ್ಪಿಸಿದರು.

LEAVE A REPLY

Please enter your comment!
Please enter your name here